Tagged: mangalore

ಕರಾವಳಿಯಲ್ಲಿ ಮಳೆರಾಯ ಯಾಕೆ ಬರ‍್ತಾ ಇಲ್ಲ ?

ರಾಜ್ಯದ ಹೆಚ್ಚು ಮಳೆ ಬೀಳುವ, ಕಡಲತಡಿಯ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈ ಬಾರಿ ಕುಡಿವ ನೀರಿಗೆ ತತ್ವಾರ ಆರಂಭವಾಗಿದೆ. ಈ ನೀರಿನ ಬರ ಕೇವಲ ನಗರ ಪ್ರದೇಶಕ್ಕೆ ಸೀಮಿತವಾಗದೆ ಗ್ರಾಮೀಣ ಪ್ರದೇಶಗಳಿಗೂ ವ್ಯಾಪಿಸಿದೆ.
ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ 2018ರಲ್ಲಿ 4616.7ಮಿಮೀ ಮಳೆಯಾಗುವ ಮೂಲಕ ಒಂದು ಹೊಸ ದಾಖಲೆ ನಿರ್ಮಾಣವಾಗಿತ್ತು. ಆದರೆ ಪ್ರಾಕೃತಿಕ ವೈಪರೀತ್ಯವೋ ಎಂಬಂತೆ ಡಿಸೆಂಬರ್ ತಿಂಗಳಾಂತ್ಯಕ್ಕೆ ಜಿಲ್ಲೆಯಾದ್ಯಂತ ಭೂಮಿಯ ಒರತೆ ಕಡಿಮೆಯಾಗಿ, ಕುಡಿಯುವ ನೀರಿಗೂ ತತ್ವಾರ ಬಂದಿದೆ.

ಮಳೆಗಾಲದಲ್ಲಿ ಕರಾವಳಿ ಜಿಲ್ಲೆಗಳು ನೆರೆಯಲ್ಲಿ ಮುಳುಗಿದರೆ, ಬೇಸಗೆಯಲ್ಲಿ ಬಿಸಿಲ ಬೇಗೆಗೆ ಹೈರಾಣಾಗುತ್ತಿವೆ. ಕರಾವಳಿ ಭಾಗದಲ್ಲಿ ಗುರುವಾರ ಬಿಸಿಲ ತಾಪ 37 ಡಿಗ್ರಿಗೆ ತಲುಪಿದ್ದು, ಜನ ಮಳೆಯ ನಿರೀಕ್ಷೆಯಲ್ಲಿದ್ದಾರೆ.

ಬೀದಿ ನಾಯಿ ಉಳಿಸಲು ಯುವಕನ ರಿಫ್ಲೆಕ್ಟಿಂಗ್ ಬೆಲ್ಟ್ ಸಾಹಸ

ಕುಡ್ಲ ಸಿಟಿಯೊಳಗೆ ರಾತ್ರಿ ವೇಳೆ ಬೀದಿ ನಾಯಿಗಳಿಂದ ನಡೆಯುವ ಅಪಘಾತಗಳ ಸಂಖ್ಯೆ ಹೆಚ್ಚು. ಕತ್ತಲಲ್ಲಿ ಏಕಾಏಕಿ ನಾಯಿಗಳು ವಾಹನಕ್ಕೆ ಅಡ್ಡಬರುವುದು ಗೋಚರಿಸುವುದಿಲ್ಲ.
ಇದರಿಂದ ವಾಹನ ಸವಾರ ತಬ್ಬಿಬ್ಬಾಗಿ ಅಪಘಾತಕ್ಕೀಡಾಗುತ್ತಾನೆ. ಅಂದಹಾಗೆ ರಿಫ್ಲೆಕ್ಟರ್ ಬೆಲ್ಟ್ ಎಂದರೆ ರಸ್ತೆ ಬದಿಯ ಕಂಬಗಳಿಗೆ ಅಂಟಿಸಿರುವ, ರಾತ್ರಿ ವೇಳೆ ಮಿನುಗುವ ಬಣ್ಣದ ಪಟ್ಟಿ ಮಾದರಿಯ ಬೆಲ್ಟ್ ಇದು. ರಾತ್ರಿ ಈ ಬಣ್ಣದ ಪಟ್ಟಿಯ ಮೇಲೆ ಬೆಳಕು ಬಿದ್ದಾಗ ಮಿನುತ್ತದೆ. ದೂರದಿಂದಲೇ ಇದು ಗೋಚರವಾಗುತ್ತದೆ.
ನಾಯಿಗಳ ಕೊರಳಲ್ಲಿನ ಬೆಲ್ಟ್‌ನಲ್ಲಿಯೂ ಇದೇ ರೀತಿಯ ಗುಣಮಟ್ಟದ ಪಟ್ಟಿ ಹಾಕಲಾಗಿದೆ. ನಾಯಿಯ ಚಲನವಲನ ಬೈಕ್ ಸವಾರನಿಗೆ ದೂರದಿಂದಲೇ ತಿಳಿದು ಮುನ್ನೆಚ್ಚರಿಕೆ ವಹಿಸಬಹುದು. ತೌಸಿಫ್ ಅವರು ಎನಿಮಲ್ ಕೇರ್ ಟ್ರಸ್ಟ್‌ನ ಸಕ್ರಿಯ ಸದಸ್ಯ. ನಗರದಲ್ಲಿ ಹಾವು, ನಾಯಿ, ಪಕ್ಷಿ, ದನಗಳು ಗಾಯಗೊಂಡಿದ್ದರೆ ತಕ್ಷಣ ತಂಡದೊಂದಿಗೆ ಆಗಮಿಸಿ ಚಿಕಿತ್ಸೆ ನೀಡುತ್ತಾರೆ.
ಬೀದಿ ನಾಯಿಗಳ ರಕ್ಷಣೆ ಮಾಡಿ ಶೆಲ್ಟರ್‌ನಲ್ಲಿ ಆರೈಕೆ ಮಾಡುತ್ತಾರೆ. ಕಳೆದ ಮಳೆಗಾಲದಲ್ಲಿ ಮಡಿಕೇರಿಯಲ್ಲಿ ಪ್ರವಾಹ ಬಂದು ದನ, ನಾಯಿಗಳಿಗೆ ಆಹಾರವಿಲ್ಲದೇ ಇದ್ದಾಗ ಸ್ಥಳಕ್ಕೆ ತಂಡದೊಂದಿಗೆ ಧಾವಿಸಿ ಹಲವು ಶ್ವಾನ, ದನಗಳನ್ನು ರಕ್ಷಿಸಿದ್ದರು.

ಮಂಗಳೂರು ಮಲ್ಲಿಗೆಗೆ ಮನಸೋಲದವರಿಲ್ಲ

ಮಲ್ಲಿಗೆ ತುಳುನಾಡಿನ ಮಣ್ಣಿಂದ ಮಿಂದೆದ್ದ ಸುಗಂಧವತಿ. ಇಲ್ಲಿ ಮಲ್ಲಿಗೆ ಇಲ್ಲದೆ ಯಾವುದೇ ಮಂಗಳ ಕಾರ್ಯ ನಡೆಯುವುದಿಲ್ಲ.
ಭೌಗೋಳಿಕ ಚಿಹ್ನೆಯ ಮಾನ್ಯತೆ ಪಡೆದ ಉಡುಪಿ ಮಲ್ಲಿಗೆ ವಹಿವಾಟಿನಲ್ಲಿ ಮುಂಚೂಣಿಯಲ್ಲಿದ್ದರೆ, ಸಾಂಪ್ರದಾಯಿಕ ಹಿನ್ನೆಲೆ ಹಾಗೂ ಘಮಘಮಿಸುವ ಪರಿಮಳದಿಂದ ಮಂಗಳೂರು ಮಲ್ಲಿಗೆ ಇಂದಿಗೂ ತನ್ನದೇ ಆದ ವಿಶೇಷತೆ ಉಳಿಸಿಕೊಂಡಿದೆ.
ಮಂಗಳೂರು ಮಲ್ಲಿಗೆ ಉಡುಪಿ ಮಲ್ಲಿಗೆಗಿಂತ ಗಾತ್ರದಲ್ಲಿ ಸ್ವಲ್ಪ ದೊಡ್ಡದು. ಮೊಗ್ಗಿನ ತುದಿ ಮೊನಚಾಗಿರುತ್ತದೆ. ಉಡುಪಿ ಮಲ್ಲಿಗೆ ಮೊಗ್ಗು ತುದಿ ಸ್ವಲ್ಪ ಮೊಂಡು.
ಮಧುಮಗಳ ಸಿಂಗಾರಕ್ಕೆ ಎರಡು ಚೆಂಡಾದರೂ ಮಂಗಳೂರು ಮಲ್ಲಿಗೆ ಬೇಕು ಎನ್ನುವ ನಂಬಿಕೆಯನ್ನು ಈ ಭಾಗದ ಹೆಚ್ಚಿನ ಜನರು ಬೆಳೆಸಿಕೊಂಡಿದ್ದಾರೆ. ಹಿಂದುಗಳ ಎಲ್ಲ ಮಂಗಳ ಕಾರ್ಯಕ್ರಮಗಳಿಗೆ ಈ ಹೂವು ಬೇಕೇಬೇಕು.
ಬ್ರಾಹ್ಮಣರು, ಬಂಟರು, ಜಿಎಸ್ಬಿ ಸಮುದಾಯದವರು ಹೆಚ್ಚಿನ ಪ್ರಮಾಣದಲ್ಲಿ ಉಪಯೋಗಿಸುತ್ತಾರೆ.ಉಡುಪಿ ಮಲ್ಲಿಗೆ, ಶಂಕರಪುರ ಮಲ್ಲಿಗೆ, ಭಟ್ಕಳ ಮಲ್ಲಿಗೆ, ಮಂಗಳೂರು ಮಲ್ಲಿಗೆ ಹೀಗೆ ವಿವಿಧ ಹೆಸರುಗಳ ಮಲ್ಲಿಗೆ ಕರಾವಳಿ ಮಾರುಕಟ್ಟೆಯಲ್ಲಿ ದೊರೆಯುತ್ತದೆ.

ಮಲ್ಟಿಫ್ಲೆಕ್ಸ್ ಸವಲತ್ತು, ಕಡಿಮೆ ರೇಟು ಸುಚಿತ್ರಾ ಥಿಯೇಟರು !

ಮಂಗಳೂರಿನ ಕೆಎಸ್‌ರಾವ್ ರಸ್ತೆಯಲ್ಲಿರುವ ಖ್ಯಾತ ಸಿನಿಮಾ ಮಂದಿರಗಳಲ್ಲಿ ಒಂದಾಗಿರುವ ಸುಚಿತ್ರಾ ಚಿತ್ರಮಂದಿರ ನವೀಕೃತಗೊಂಡು ಏ.26 ರಂದು ಒಂದು ವರ್ಷವನ್ನು ಪೂರೈಸಿದೆ.
ಇಡೀ ಜಿಲ್ಲೆಯ ಸಿನಿಮಾ ಮಂದಿರಗಳಲ್ಲಿಯೇ ವಿಭಿನ್ನ ತಾಂತ್ರಿಕ ವ್ಯವಸ್ಥೆ ಹಾಗೂ ಕಡಿಮೆ ದರದಲ್ಲಿ ಪ್ರೇಕ್ಷಕರಿಗೆ ಮಲ್ಟಿ ಫ್ಲೆಕ್ಸ್ ಮಟ್ಟದ ಮನರಂಜನೆ ನೀಡುವ ಕೆಲಸವನ್ನು ಸುಚಿತ್ರಾ ಸಿನಿಮಾ ಮಂದಿರ ನೀಡುತ್ತಾ ಬಂದಿದೆ.
ನವೀಕೃತಗೊಂಡ ಬಳಿಕ ಸುಚಿತ್ರಾ ಸಿನಿಮಾ ಮಂದಿರಕ್ಕೆ ಬರುವ ಪ್ರೇಕ್ಷಕರ ಸಂಖ್ಯೆ ಈಗ ಏರುಗತಿಯಲ್ಲಿದೆ. ಯುವಜನತೆಯ ಫೇವರಿಟ್ ಸಿನಿಮಾ ಮಂದಿರ ಎನ್ನುವ ಹೆಗ್ಗಳಿಕೆಯ ಜತೆಗೆ ಫ್ಯಾಮಿಲಿ ಆಡಿಯನ್ಸ್‌ಗೂ ಈ ಥಿಯೇಟರ್ ಇಷ್ಟವಾಗಿದೆ. ಎಲ್ಲಕ್ಕೂ ಮುಖ್ಯವಾಗಿ ಬಜೆಟ್ ಆಧಾರಿತ ಸಿನಿಮಾ ಮಂದಿರ ಎನ್ನಬಹುದು.
ಕಾರಣ ಇಲ್ಲಿ ಟಿಕೇಟು ದರದಲ್ಲಿಯೂ ನಗರದ ಮಲ್ಟಿಫ್ಲೆಕ್ಸ್ ಟಿಕೇಟ್ ದರಕ್ಕಿಂತ ಕಡಿಮೆಯಿದೆ. ಮುಖ್ಯವಾಗಿ ಇಲ್ಲಿ ಸಿನಿಮಾ ವೀಕ್ಷಣೆಗೆ ಬರುವ ಪ್ರೇಕ್ಷಕರಿಗೆ ಕೋಲ್ಡ್ ಡ್ರಿಂಕ್ಸ್, ಪಾಪ್ ಕಾರ್ನ್‌ಗಳ ದರನೂ ಬಹಳಷ್ಟು ಕಡಿಮೆ ಎನ್ನುತ್ತಾರೆ ಸುಚಿತ್ರಾ ಸಿನಿಮಾ ಮಂದಿರದ ಎಂಜಿನಿಯರ್ ಸುಧೀಂದ್ರ ಅವರು.
806 ಸೀಟುಗಳನ್ನು ಹೊಂದಿರುವ ಸುಚಿತ್ರಾ ಸಿನಿಮಾ ಮಂದಿರದಲ್ಲಿ ಪಾರ್ಕಿಂಗ್‌ಗೆ ಯಾವುದೇ ದರವನ್ನು ವಿಧಿಸಲಾಗುವುದಿಲ್ಲ. ಜತೆಗೆ ವಿಶಾಲವಾದ ಪಾರ್ಕಿಂಗ್ ವ್ಯವಸ್ಥೆಯಿಂದಾಗಿ ಇಲ್ಲಿ ಪ್ರೇಕ್ಷಕರು ಜಾಸ್ತಿಯಾಗುತ್ತಿದ್ದಾರೆ. ಅದರಲ್ಲೂ ಕಡಿಮೆ ದರದಲ್ಲೂ ಹವಾನಿಯಂತ್ರಿತ ವ್ಯವಸ್ಥೆಯ ಜತೆಗೆ ಸಿನಿಮಾ ನೋಡುವ ಅನುಭವವಂತೂ ಪ್ರೇಕ್ಷಕರಿಗೆ ಖುಷಿ ಕೊಡುತ್ತಿದೆ ಎನ್ನುವುದು ಅವರ ಮಾತು.
ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಪ್ರಶಾಂತ್ ನಾರಾಯಣ್, ಮ್ಯಾನೇಜರ್ ಸುಬ್ರಾಯ ಪೈ ಅವರ ಉಸ್ತುವಾರಿಯಲ್ಲಿ ಸುಚಿತ್ರಾ ಸಿನಿಮಾ ಮಂದಿರ ಉತ್ತಮ ರೀತಿಯಲ್ಲಿ ನಡೆಯುತ್ತಿದೆ. ಬೆಂಗಳೂರಿನ ಡಿ.ಎನ್.ಗೋಪಾಲಕೃಷ್ಣ ಅವರು ಸ್ಥಾಪಿಸಿರುವ ಲಕ್ಷ್ಮೀ ನಾರಾಯಣ ಎಂಟರ್ ಪ್ರೈಸಸ್ ಸುಚಿತ್ರಾ, ಪ್ರಭಾತ್ ಚಿತ್ರಮಂದಿರವನ್ನು ನಡೆಸುತ್ತಿದೆ.
Suchitra And Prabhath Theatre in Ks Rao Road, Mangalore is a top player in the category Cinema Halls in the Mangalore

ಬಾಲಿವುಡ್ ಬಿಗ್ ಬಿ ಗೂ ಪ್ರೇರಣೆಯಾದ ಸಬಿತಾ

ಬೆಳ್ತಂಗಡಿಯ ಸಬಿತಾ ಮೋನಿಸ್ ಅವರ ಬದುಕು ಬಾಲಿವುಡ್‌ನ ಹಿರಿಯ ನಟ ಅಮಿತಾಭ್ ಬಚ್ಚನ್ ಅವರಿಗೂ ಪ್ರೇರಣೆಯ ಶಕ್ತಿ ಎನ್ನುವುದಕ್ಕೆ ಅವರ ಟ್ವೀಟ್‌ಯೇ ದಾಖಲೆ.
ಸಬಿತಾ ಮತದಾನದಲ್ಲಿ ಭಾಗವಹಿಸುವ ರೀತಿ ಇದೆಯಲ್ಲ ಅದು ಎಲ್ಲರಿಗೂ ಪ್ರೇರಣೆ ನೀಡುವಂತದ್ದು, ಅಂದಹಾಗೆ ಸಬಿತಾ ಮೋನಿಸ್‌ಗೆ ಕೈಗಳಿಲ್ಲ ಆದರೆ ಇಡೀ ಬದುಕಿನಲ್ಲಿ ಕಾಲುಗಳೇ ಅವರಿಗೆ ಕೈಗಳಂತೆ ಸಾಥ್ ಕೊಟ್ಟಿದೆ.
ಇದೇ ವಿಚಾರವನ್ನು ಅಮಿತಾಭ್ ಬಹಳ ಹಿಂದೆ ತಮ್ಮ ಟ್ವಿಟ್ಟರ್‌ನಲ್ಲಿ ಹೇಳುವ ಮೂಲಕ ಇಡೀ ದೇಶದ ಜನರಿಗೆ ಸಬಿತಾ ಅವರ ಪರಿಚಯ ಮಾಡಿಕೊಟ್ಟರು. ಅಂದಹಾಗೆ ಸಬಿತಾ ವಿದ್ಯಾವಂತೆ ಜತೆಗೆ ಕಾಲೇಜು ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿದ್ದಾರೆ.
ತಮಗೆ ಕೈಗಳಿಲ್ಲ ಎಂದು ಎಂದಿಗೂ ಬೇಸರ ಪಡದ ಮಹಿಳೆ. ದೇವರು ಕೊಟ್ಟದ್ದು ತನಗೆ ಇಷ್ಟೇ ಎಂದೇ ಮನಸ್ಸು ಕುಗ್ಗದೇ ಇರುವುದರಲ್ಲಿಯೇ ಸಾಧನೆ ಮಾಡುವ ಛಾತಿ ಇಟ್ಟುಕೊಂಡಿರುವವರು.