Author: Team Kudla City

ಮಂಗಳೂರಿನ ಹಳೆಯ ಬಜಾರ್

ಬಜಾರ್ ಎನ್ನುವ ಕಲ್ಪನೆ. ಕುಡ್ಲದಲ್ಲಿ 1937 ರಲ್ಲಿ ಇತ್ತು. ಕುಡ್ಲದ ಗಣಪತಿ ಸ್ಕೂಲ್ ರೋಡ್ ನ ಈ ಬಜಾರ್ ಗೊತ್ತಿದ್ದವರು ಹೇಳಿ…ಇಲ್ಲಿ ಮೊದಲು ಏನೆಲ್ಲ ಇತ್ತು ಎನ್ನುವುದನ್ನು ನೆನಪು ಇದ್ದವರು ಹೇಳಿ…

ಮಂಗಳೂರಿನಲ್ಲಿ ಮಳೆ ಹೆಚ್ಚಳ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನಲ್ಲಿ ‌ಕಳೆದ ಐದಾರು‌ ದಿನಗಳಿಂದ ಮಳೆಯಾಗುತ್ತಿದ್ದು, ಇನ್ನಷ್ಟು ಉತ್ತಮ ಮಳೆ ಮುಂದಿನ ದಿನಗಳಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.

ಪಿಲಿಕುಳ ಜೈವಿಕ ಪಾರ್ಕ್ ನಲ್ಲಿ ನೈಟ್ ವಿಶನ್ ಕಣ್ಗಾವಲು

ಕರಾವಳಿಯ ಪ್ರಮುಖ ಪ್ರವಾಸಿ ಕೇಂದ್ರಗಳಲ್ಲಿ ಒಂದಾಗಿರುವ ಪಿಲಿಕುಳ ಜೈವಿಕ ಉದ್ಯಾನದಲ್ಲಿ ಪ್ರಾಣಿ-ಪಕ್ಷಿಗಳು ಮತ್ತು ಪ್ರವಾಸಿಗರ ಮೇಲೆ ನಿಗಾ ಇಡುವ ನಿಟ್ಟಿನಲ್ಲಿ ಹೈ ರೆಸೊಲ್ಯೂಷನ್ ಹೊಂದಿರುವ ನೈಟ್ ವಿಷನ್ (ರಾತ್ರಿಯೂ ಸ್ಪಷ್ಟವಾಗಿ ಗೋಚರಿಸುವ) ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಸಲು ಉದ್ದೇಶಿಸಲಾಗಿದೆ. ಈಗಾಗಲೇ ಟೆಂಡರ್ ಕರೆಯಲಾಗಿದ್ದು, ಹದಿನೈದು ದಿನಗಳಲ್ಲಿ ಅಳವಡಿಕೆ ಪ್ರಕ್ರಿಯೆ ಆರಂಭವಾಗಲಿದೆ. ಇದಕ್ಕೆ ಕೇಂದ್ರ ಮೃಗಾಲಯ ಪ್ರಾಧಿಕಾರ ಹಣಕಾಸಿನ ನೆರವು ನೀಡಿದೆ.

150 ಎಕರೆ ವಿಸ್ತೀರ್ಣ ಹೊಂದಿರುವ ಪಾರ್ಕ್‌ನಲ್ಲಿ ಪ್ರಸ್ತುತ 16 ಕ್ಯಾಮರಾಗಳಿವೆ. ಇವುಗಳಲ್ಲಿ ಪ್ರವೇಶ ದ್ವಾರದಲ್ಲಿ ಹೊರತು ಪಡಿಸಿದರೆ, ಹೆಚ್ಚಿನವು ರಸ್ತೆಯತ್ತ ಮುಖ ಮಾಡಿವೆ. ನಿಗದಿತ ಸ್ಥಳಗಳಲ್ಲಿ ಕ್ಯಾಮರಾಗಳಿಲ್ಲದೆ ಪಾರ್ಕ್ ಒಳಗಿನ ಬಹುತೇಕ ಪ್ರದೇಶವನ್ನು ಒಂದು ಕಡೆಯಲ್ಲಿ ಕುಳಿತು ಮಾನೀಟರ್ ಮಾಡಲು ಸಾಧ್ಯವಾಗುವುದಿಲ್ಲ. ಆದ್ದರಿಂದ ಪಾರ್ಕ್ ಒಳಗೆ ಕ್ಯಾಮರಾ ಅಳವಡಿಸಲು ಜೈವಿಕ ಉದ್ಯಾನ ಆಡಳಿತ ಸಮಿತಿ ನಿರ್ಧರಿಸಿದೆ.

*2 ಕಿ.ಮೀ. ವ್ಯಾಪ್ತಿ:* 50 ಹೊಸ ಕ್ಯಾಮರಾ ಹಾಗೂ ಬೃಹತ್ ಟಿವಿ ಸ್ಕ್ರೀನ್ ಅಳವಡಿಸುವ ಕುರಿತ ಟೆಂಡರ್ ಪ್ರಕ್ರಿಯೆ ಮುಗಿದಿದ್ದು, ಸುಮಾರು 15 ಲಕ್ಷ ರೂ. ವೆಚ್ಚವಾಗಲಿದೆ. ಪಾರ್ಕ್‌ನ ಎರಡು ಕಿ.ಮೀ. ವ್ಯಾಪ್ತಿಯನ್ನು ಪ್ರಧಾನ ಕಚೇರಿಯಲ್ಲಿ ಕುಳಿತು ಟಿವಿ ಪರದೆ ಮೂಲಕ ಪರಿಶೀಲಿಸಬಹುದಾಗಿದೆ. ಉದ್ಯಾನವನದಲ್ಲಿರುವ ಪಶ್ಚಿಮ ಘಟ್ಟದ ಅಳಿವಿನಂಚಿನಲ್ಲಿರುವ ಪ್ರಾಣಿ-ಪಕ್ಷಿ ಸಂಕುಲಗಳ ಕುರಿತು ವಿಶೇಷ ಗಮನ ನೀಡುವುದು ಆಡಳಿತ ಸಮಿತಿ ಉದ್ದೇಶವಾಗಿದೆ. ಜತೆಗೆ ಪ್ರವಾಸಿಗರು ಪ್ರಾಣಿಗಳಿಗೆ ತೊಂದರೆ ನೀಡಿದರೆ, ಆಹಾರ ಪದಾರ್ಥಗಳನ್ನು ಎಸೆದರೆ, ಅನುಚಿತವಾಗಿ ವರ್ತಿಸಿದರೆ ಎಚ್ಚರಿಕೆ ನೀಡಲೂ ಇದರಿಂದ ಅನುಕೂಲವಾಗಲಿದೆ.

*ಏನಿದು ನೈಟ್ ವಿಷನ್ ಕ್ಯಾಮರಾ?: *ಸಾಮಾನ್ಯ ಸಿಸಿಟಿವಿ ಕ್ಯಾಮರಾಗಳು ಹಗಲು ವೇಳೆ ಉತ್ತಮವಾಗಿ ಚಿತ್ರೀಕರಿಸಿದರೂ, ರಾತ್ರಿಯ ಚಿತ್ರೀಕರಣ ಮಬ್ಬಾಗಿರುತ್ತದೆ. ಆದರೆ ನೈಟ್ ವಿಷನ್ ಕ್ಯಾಮರಾಗಳು ಹಗಲಿನಂತೆ ರಾತ್ರಿ ವೇಳೆಯೂ ಸ್ಪಷ್ಟವಾಗಿ ಸೆರೆ ಹಿಡಿಯುತ್ತದೆ. ಇದಕ್ಕೆ ಬೆಳಕಿನ ಅವಶ್ಯಕತೆಯಿಲ್ಲ, ಆದರೆ ಕಪ್ಪು ಬಿಳುಪಿನಲ್ಲಿ ದೃಶ್ಯಗಳನ್ನು ಚಿತ್ರೀಕರಿಸುತ್ತದೆ.

ಹರೇಕಳ ಹಾಜಬ್ಬರಿಗೆ ಪದ್ಮಶ್ರೀ ಪ್ರಶಸ್ತಿ

ಮಂಗಳೂರಿನ ಹರೇಕಳದ ಹಾಜಬ್ಬರಿಗೆ ಪದ್ಮಶ್ರೀ ಪ್ರಶಸ್ತಿ ಘೋಷಣೆಯಾಗಿದೆ. ಇಡೀ ತುಳುನಾಡಿಗೆ ಮಾತ್ರವಲ್ಲ ಇಡೀ ಕರ್ನಾಟಕ ಇದು ಹೆಮ್ಮೆಯ ವಿಚಾರ.
ಅಂದಹಾಗೆ ಇವರು ಕೋಟ್ಯಾಧಿಪತಿಯಲ್ಲ. ಉನ್ನತ ವಿದ್ಯಾಭ್ಯಾಸವಂತೂ ಅವರಿಗೆ ದೂರದ ಬೆಟ್ಟವಾದರೂ ಪಕ್ಕಾ ಅಕ್ಷರ ಸ್ನೇಹಿ. ಮಂಗಳೂರಿನ ರಸ್ತೆ ಬದಿಗಳಲ್ಲಿ ಕಿತ್ತಳೆ ಹಣ್ಣು ಮಾರಿಕೊಂಡು ನಿತ್ಯ ಜೀವನ ಸಾಗಿಸುತ್ತಿರುವ ಹಾಜಬ್ಬನವರು ತಮ್ಮ ಜೀವನ ಸುಖಗಿಂತಲೂ ಬೇರೆಯವರ ನೋವಿಗೆ ಸ್ಪಂದಿಸುವವರು.

ಹಾಜಬ್ಬನವರು ಕಿತ್ತಳೆ ವ್ಯಾಪಾರದಿಂದ ಅವರಿಗೆ ದಿನಕ್ಕೆ ಲಭಿಸುವುದು ಕೇವಲ 100 ರಿಂದ 150 ರೂಪಾಯಿ. ಮಂಗಳೂರು ನಗರದಲ್ಲಿ ಕಿತ್ತಳೆ ಹಣ್ಣು ಮಾರುವ ಮೂಲಕ ಅಕ್ಷರದ ಕನಸು ಕಂಡ ಅವರು ತನ್ನೂರಾದ ಹರೇಕಳ ನ್ಯೂಪಡು ಎಂಬ ಪುಟ್ಟ ಹಳ್ಳಿಯಲ್ಲಿ ಬಡ ವಿದ್ಯಾರ್ಥಿಗಳ ಶಿಕ್ಷಣಕ್ಕಾಗಿ ಸರಕಾರಿ ಕಚೇರಿಗಳಿಗೆ ಅಲೆದು ಕೊನೆಗೂ ಪ್ರಾಥಮಿಕ ಶಾಲೆಗೆ ಅನುದಾನ ತಂದು ಕೊಡುವ ಕೆಲಸದಲ್ಲಿ ಯಶಸ್ಸು ಪಡೆದವರು.
ವಿಶೇಷ ಎಂದರೆ ಈ ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷರನ್ನಾಗಿ ಹಾಜಬ್ಬ ಅವರನ್ನು ಆಯ್ಕೆ ಮಾಡಿದ ನಂತರ ಅವರು ನಾನಾ ಇಲಾಖೆಗಳಿಗೆ ಭೇಟಿ ಕೊಟ್ಟು ಅನುದಾನ ಕೊಡುವ ತನಕನೂ ಅಲ್ಲಿಂದ ಕದಲದೇ ಅಧಿಕಾರಿಗಳು ಕೊನೆಗೆ ಅನುದಾನ ಮಂಜೂರು ಮಾಡುವಂತಹ ಸ್ಥಿತಿಗೆ ತಂದು ಬಿಟ್ಟಿದ್ದರು. ನಿಜವಾಗಿಯೂ ಅವರ ಹೋರಾಟದ ಬದುಕು ಈಗ ಜಗತ್ತು ಅರಿತಿದೆ.