Tagged: tulunadu

ತುಳುನಾಡಿನ ಬಸ್, ರೈಲು,ವಿಮಾನ ನಿಲ್ದಾಣದಲ್ಲಿ ತುಳು ತಿನಸ್

ಮಂಗಳೂರು: ತುಳು ಸಾಹಿತ್ಯ ಅಕಾಡೆಮಿಯು ಬೆಳ್ಳಿ ಹಬ್ಬದ ಅಂಗವಾಗಿ ಕರಾವಳಿಯ ಪ್ರಮುಖ ಬಸ್‌ ನಿಲ್ದಾಣ, ರೈಲು ನಿಲ್ದಾಣ, ವಿಮಾನ ನಿಲ್ದಾಣದಲ್ಲಿ ತುಳುನಾಡಿನ ತಿಂಡಿ ತಿನಸುಗಳನ್ನು ಪರಿಚಯ ಮಾಡುವ ಯೋಜನೆಯೊಂದನ್ನು ಕೈಗೊಳ್ಳಲಾಗಿದೆ.
ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಿಗೆ ಅನ್ಯ ರಾಜ್ಯ ಮತ್ತು ವಿದೇಶಗಳಿಂದಲೂ ಹೆಚ್ಚಿನ ಪ್ರವಾಸಿಗರು ಆಗಮಿಸುತ್ತಿದ್ದು, ಅವರಿಗೆ ಈ ನೆಲದ ಭಾಷೆ, ಸಂಸ್ಕೃತಿ, ತಿಂಡಿ-ತಿನಿಸು ಪರಿಚಯಿಸುವುದು ಈ ಯೋಜನೆಯ ಮುಖ್ಯ ಉದ್ದೇಶ. ವಿದೇಶಗಳಿಗೆ ನಾವು ಹೋದಾಗ ಅಲ್ಲಿನವರು ಅವರ ಸಂಸ್ಕೃತಿಯನ್ನು ಪರಿಚಯಿಸುತ್ತಾರೆ. ಅದೇ ರೀತಿ ನಮ್ಮಲ್ಲಿಗೆ ಬರುವ ವಿದೇಶಿಗರಿಗೆ ತುಳು ನಾಡಿನ ಸಂಸ್ಕೃತಿಯ ಪರಿಚಯ ವಾಗಬೇಕು ಎಂಬ ನಿಟ್ಟಿನಲ್ಲಿ ತುಳು ಸಾಹಿತ್ಯ ಅಕಾಡೆಮಿಯು ಈ ವಿನೂತನ ಪ್ರಯತ್ನಕ್ಕೆ ಮುಂದಾಗಿದೆ.
ತುಳುನಾಡಿನ ಮಳಿಗೆಗಳಲ್ಲಿ ತುಳುನಾಡ ಮುಟ್ಟಾಳೆ, ಕಂಬಳದ ಬೆತ್ತ, ಗೆರಟೆ ಸಹಿತ ಕರಕುಶಲ ವಸ್ತುಗಳು ಅಲ್ಲದೆ ತುಳುನಾಡಿನ ಅಧ್ಯಯನದ ಪುಸ್ತಕ ಗಳೂ ಇರಲಿವೆ. ತುಳು ಲಿಪಿಯನ್ನು ಪರಿಚಯಿಸುವ ಉದ್ದೇಶದಿಂದ ಮರದ ಕೀ-ಬಂಚ್‌ನಲ್ಲಿ ತುಳು ಲಿಪಿಯಲ್ಲಿ ಹೆಸರು ಬರೆದುಕೊಡುವ ಸೌಲಭ್ಯವೂ ಇರುತ್ತದೆ.

ನೀರುದೋಸೆ, ಬನ್ಸ್‌, ಪತ್ರೊಡೆ, ಗೋಳಿಬಜೆ ಸಹಿತ ತುಳುನಾಡಿನ ಪ್ರಸಿದ್ಧ ತಿನಿಸುಗಳನ್ನು ಬಸ್‌, ರೈಲು ಮತ್ತು ವಿಮಾನ ನಿಲ್ದಾಣಗಳಿಗೆ ಹೊಂದಿಕೊಂಡಿರುವ ಹೊಟೇಲ್‌ಗ‌ಳಲ್ಲಿ ಸಿಗುವಂತೆ ಮಾಡಲು ಚಿಂತನೆ ನಡೆಯುತ್ತಿದೆ.

ಮಣ್ಣಗುಡ್ಡೆಯ ಗುರ್ಜಿಗೆ 150ರ ಸಂಭ್ರಮ

ಮಂಗಳೂರಿಗೆ ಬರುವ ಮಂದಿಗೆ ಗುರ್ಜಿಯ ವಿಚಾರ ಗೊತ್ತಿರಲು ಸಾಧ್ಯವಿಲ್ಲ. ಅಂದಹಾಗೆ ಮಂಗಳೂರಿನ ಮಂಗಳಾದೇವಿ, ಉರ್ವಸ್ಟೋರ್, ಉರ್ವ ಮಾರ್ಕೆಟ್, ಬಳ್ಳಾಲ್ ಬಾಗ್ ಹಾಗೂ ಮಣ್ಣಗುಡ್ಡೆ‌ ಇಲ್ಲಿ ಪ್ರತಿ ವರ್ಷ ಗುರ್ಜಿ ಸಂಭ್ರಮ ನಡೆಯುತ್ತದೆ. ವಿಶೇಷವಾಗಿ ಮಣ್ಣಗುಡ್ಡೆ ಗುರ್ಜಿಗೆ 150 ವರ್ಷ ತುಂಬಿದೆ.

ಇದರ ವಿಶೇಷತೆ ಏನೂ ಅಂದರೆ ಮಂಗಳೂರಿನ ಇತಿಹಾಸ ಪ್ರಸಿದ್ಧ ಮಣ್ಣಗುಡ್ಡೆ ಗುರ್ಜಿ ಆರಂಭವಾದ ಕಥೆ ರೋಚಕವಾದುದು. ಭಕ್ತಿಗೆ ದೇವರು ಒಲಿಯುತ್ತಾನೆ ಎನ್ನುವುದಕ್ಕೆ ಮಣ್ಣಗುಡ್ಡೆ ಗುರ್ಜಿ ಆರಂಭವಾದ ಕಥೆ ಸಾಕ್ಷಿ. ಏನಿದು ಇತಿಹಾಸ ಮುಂದೆ ಓದಿ…

ಗುರ್ಜಿ ಅಂದ್ರೆ ಚಲಿಸದ ರಥ ಎಂದರ್ಥ. ರಥದಂತೆ ಶೃಂಗರಿಸಿದ ತಾತ್ಕಾಲಿಕ ದೇವರ ಕಟ್ಟೆ ಇದು. ಮಣ್ಣಗುಡ್ಡೆ ಗುರ್ಜಿ ಆರಂಭಿಸಿದವರು ಕೋಟೇಶ್ವರ ಬ್ರಾಹ್ಮಣ ಮನೆತನದ ಹಿರಿಯ ವಾದಿರಾಜರು. ಕುಲೋದ್ಧಾರಕ ಇಲ್ಲದ ಚಿಂತೆಯಿಂದ ಶರವು ಮಹಾಗಣಪತಿಯನು ಪ್ರಾರ್ಥಿಸಿ ಪುತ್ರ ಸಂತಾನ ಕರುಣಿಸಿದರೆ ಪ್ರತಿ ವರ್ಷ ತಮ್ಮ ಮನೆಗೆ ಕರೆಸಿ ದೀಪಾರಾಧನೆ ಮಾಡುತ್ತೇನೆ ಎಂದು ಸಂಕಲ್ಪ ಮಾಡಿದ್ದರು.

ಅದರಂತೆ ದೇವರು ಆಶೀರ್ವಾದ ಮಾಡಿದ್ದಾರೆ. 1870ನೇ ಇಸವಿಯಲ್ಲಿ ಇಷ್ಟಾರ್ಥ ಸಿದ್ದಿ ನೆರವೇರಿಸಿದ ಶ್ರೀ ಶರವು ಮಹಾಗಣತಿಗೆ ಕದ್ರಿ ಕಂಬ್ಳದಲ್ಲಿದ್ದ ಮನೆಯಲ್ಲಿ ಉತ್ಸವ ಆರಂಭಿಸಿದರು. ಕ್ರಮೇಣ ಮಂಗಳೂರಿನ ಪ್ರಮುಖ ಧಾರ್ಮಿಕ ದೀಪಾರಾಧನೆ ಉತ್ಸವವಾಯಿತು. ಈ ಬಾರಿ 2019ನೇ ನವೆಂಬರ್ 24ರಂದು ಮಣ್ಣಗುಡ್ಡೆ ಗುರ್ಜಿ 150ನೇ ವರ್ಷವನ್ನು ಆಚರಿಸುತ್ತಿದೆ.

ತುಳುನಾಡಿನ ಈಂದ್ ಹುಡಿ ಗೊತ್ತಾಂಟಾ ಮಾರಾಯ್ರೆ

ತುಳುನಾಡಿನ ಗ್ರಾಮೀಣ ಊರುಗಳಲ್ಲಿ ನೀವು ಭೇಟಿ ನೀಡಿದಾಗ ಅಲ್ಲಿಯ ಪುಟ್ಟ ಗೂಡಂಗಡಿಯ ಮುಂಭಾಗದಲ್ಲಿ ಇಲ್ಲಿ ಈಂದ್ ಹುಡಿ ಸಿಗುತ್ತದೆ ಎನ್ನುವ ನಾಮಫಲಕ ಕಾಣ ಸಿಗುತ್ತದೆ. ಬಹುತೇಕ ಮಂದಿಗೆ ಇದು ಏನೂ, ಇದರ ಲಾಭವೇನು ಎನ್ನುವ ವಿಚಾರವೇ ಗೊತ್ತಿರಲು ಸಾಧ್ಯವಿಲ್ಲ.

ಆದರೆ ತುಳುನಾಡಿನಲ್ಲಿ ಬದುಕುವ ಪ್ರತಿಯೊಬ್ಬರಿಗೂ ಈಂದ್ ಹುಡಿಯ ಪರಿಚಯವಿದೆ. ಬೈನೆ ಅಥವಾ ತಾಳೆ ಮರದಿಂದ ಈಂದ್ ಹುಡಿಯನ್ನು ಮಾಡಲಾಗುತ್ತದೆ. ಇದರ ಗುಣವಿಶೇಷತೆಯಂತೂ ಬಹಳಷ್ಟು ಇದೆ. ಒಂದು ಚಮಚ ಈಂದ್ ಹುಡಿಯನ್ನು ನೀರಿಗೆ ಅಥವಾ ಹಾಲಿಗೆ ಹಾಕಿ ಕುಡಿಯಬೇಕು. ಹೊಟ್ಟೆನೋವು, ದೇಹದ ಬಳಲಿಕೆ ಸೇರಿದಂತೆ ಹತ್ತು ಹಲವು ರೋಗಕ್ಕೆ ಇದು ಮದ್ದು. ನಾವು ಜಾಹೀರಾತು ತೋರಿಸುವ ವಸ್ತುಗಳನ್ನು ತೆಗೆದುಕೊಂಡು ಬಂದ ಪರಿಣಾಮ ಬಹಳಷ್ಟು ಇಂತಹ ಮದ್ದುಗಳ ಪರಿಚಯ ಇಲ್ಲ.

ತುಳುನಾಡಿನ ಯುವಕರ ತುಳು ಅಪ್ಪೆಯ ಸೇವೆ

ತುಳುನಾಡಿನ ಜೈ ತುಳುನಾಡ್ (ರಿ.) ಸಂಘಟನೆಯ ಸದಸ್ಯರು ತುಳು ಲಿಪಿಯ ಜಾಗೃತಿಯನ್ನು ವಿಶಿಷ್ಟ ರೀತಿಯಲ್ಲಿ ಆಂದೋಲನದಂತೆ ಮುಂದುವರಿಸುತ್ತಿದ್ದಾರೆ. ವಿಶೇಷವಾಗಿ ಗ್ರಾಮೀಣ ಭಾಗದಲ್ಲಿರುವ ತುಳುನಾಡಿನ ಊರಿನ ಹೆಸರಿನ ಜತೆಯಲ್ಲಿ ತುಳು ಲಿಪಿಯಲ್ಲೂ ಇದರ ಮಾಹಿತಿಯ ಕಾರ‍್ಯವಂತೂ ನಡೆಯುತ್ತಿದೆ. ಅಂದಹಾಗೆ ಯುವ ಕೇಸರಿ ಕೊಯ್ಕುಡೆ ಎಂಬ ಸಂಘದ ನೇತೃತ್ವದಲ್ಲಿ ಪ್ರಪ್ರಥಮ ತುಳು ಲಿಪಿ ನಾಮಫಲಕವನ್ನು ಮುಲ್ಕಿಯ ಕೊಯ್ಕುಡೆ ಎಂಬ ಊರಿನಲ್ಲಿ ಹಾಕುವ ಮೂಲಕ ತುಳು ಲಿಪಿಯ ಜಾಗೃತಿಯಲ್ಲಿ ಕೆಲಸ ಮಾಡಿದ್ದಾರೆ.

ಇದರ ಜತೆಯಲ್ಲಿ ಮುಂದೆಯೂ ಊರಿನ ಹೆಸರುಗಳು ಸೇರಿದಂತೆ ಹಂತ ಹಂತವಾಗಿ ಎಲ್ಲ ಸಾರ್ವಜನಿಕ ಸ್ಥಳಗಳಲ್ಲಿ, ಅಂಗಡಿ-ಕಂಪೆನಿ, ವಾಹನ ಸೇರಿದಂತೆ ಎಲ್ಲ ಕಡೆ ತುಳು ಲಿಪಿಯ ಬಳಕೆಯನ್ನು ಹೆಚ್ಚಾಗಿ ಬಳಸುವಂತೆ ಜನರಿಗೆ ಅರಿವು ಮೂಡಿಸುವ ಕೆಲಸವನ್ನು ಮಾಡುವ ಮೂಲಕ ತುಳುನಾಡಿನ ಜೈ ತುಳುನಾಡಿನ ಸಂಘಟನೆಯ ಯುವಕರು ಪೂರ್ಣ ಪ್ರಮಾಣದಲ್ಲಿ ತುಳು ಅಪ್ಪೆಯ ಸೇವೆಯಲ್ಲಿ ಸಂತೃಪ್ತಿಯ ಭಾವವನ್ನು ಕಾಣುತ್ತಿದ್ದಾರೆ.

ಅಷ್ಟಮಿಗೆ ಮಕ್ಕಳ ಪಾಲಿನ ದೇವರಾದ ರವಿಯಣ್ಣ

ಕಟಪಾಡಿಯ ಸಾಮಾನ್ಯ ಒಬ್ಬ ಗಾರೆ ಕೆಲಸದ ರವಿಯಣ್ಣ ಜಾಸ್ತಿ ಓದಿದವರಲ್ಲ ದೊಡ್ಡ ಹೇಳಿಕೊಳ್ಳುವ ಕೆಲಸನೂ ಇಲ್ಲ ಆದರೆ ಕಳೆದ ಐದು ವರ್ಷದಲ್ಲಿ ಅಷ್ಟಮಿಯಲ್ಲಿ ಭಿನ್ನವಾದ ವೇಷ ಹಾಕಿಕೊಂಡು ಅನಾರೋಗ್ಯ ಪೀಡಿತ ಮಕ್ಕಳ ಚಿಕಿತ್ಸೆ ಗೆ ನೆರವಾಗುವ ವಿಚಾರ ಇದೆಯಲ್ಲ ಅದು ಎಂದಿಗೂ ಸಣ್ಣ ಮಾತೇ ಅಲ್ಲ. ಈ ಬಾರಿ ದೀ ವ್ಯಾಂಪರ್ಸ್ ವೇಷದಲ್ಲಿ ಉಡುಪಿಯಲ್ಲಿ ಎರಡು ದಿನ ಕಾಣಿಸಿಕೊಳ್ಳಲಿದ್ದಾರೆ ಅವರಿಗೆ ಬೆನ್ನು ತಟ್ಟುವ ಕೆಲಸ ವಾಗಲಿ.

ಕಳೆದ ಐದು ವರ್ಷಗಳಲ್ಲಿ ಸಂಗ್ರಹಿಸಿದ ಒಟ್ಟು 35ಲಕ್ಷ ರೂ. ಹಣವನ್ನು 29 ಬಡ ಮಕ್ಕಳ ಚಿಕಿತ್ಸೆಗೆ ನೀಡಲಾಗಿದೆ. ಅದೇ ರೀತಿ ಈ ವರ್ಷವೂ ಕೂಡ ರವಿ ಮತ್ತು ಫ್ರೆಂಡ್ಸ್ ಕಟಪಾಡಿ ತಂಡ ಆ ಕಾರ್ಯ ಕ್ಕೆ ಮುಂದಾಗುತ್ತಿದೆ. ಲೀವರ್ ಕ್ಯಾನ್ಸರ್ನಿಂದ ಬಳಲುತ್ತಿರುವ ಮಂದರ್ತಿ ಮೂಡುಬಾರಳಿಯ ಕುಶಲ ಮತ್ತು ಉಷಾ ದಂಪತಿಯ ಮಗ ಶ್ರೀತನ್(3), ಬಳಿರಕ್ತ ಕಣ ಉತ್ಪತ್ತಿ ಯಾಗದ ಕಾಯಿಲೆಯಿಂದ ಬಳಲುತ್ತಿರುವ ಕುಂದಾಪುರ ವಕ್ವಾಡಿಯ ರವೀಂದ್ರ ಮತ್ತು ಯಶೋಧ ದಂಪತಿಯ ಮಗ ಪ್ರಥಮ್(5), ಮೆದಳಿನ ರಕ್ತಸ್ರಾವ ಕಾಯಿಲೆಗೆ ತುತ್ತಾಗಿರುವ ಹಿರಿಯಡಕ ಪಂಚನಬೆಟ್ಟು ಕೃಷ್ಣಮೂರ್ತಿ ಆಚಾರ್ಯ ಮತ್ತು ಕುಶಲ ದಂಪತಿಯ ಮಗ ಕಿರಣ್(18) ಸೇರಿದಂತೆ ಐದು ಮಕ್ಕಳ ಚಿಕಿತ್ಸೆ ಸಹಾಯ ಮಾಡಲಾಗುತ್ತದೆ. ಸಂಗ್ರಹವಾದ ಹಣವನ್ನು ಸೆ.3ರಂದು ಸಂಜೆ 5ಗಂಟೆಗೆ ಕಟಪಾಡಿ ಸಾರ್ವ ಜನಿಕ ಶ್ರೀಗಣೇಶೋತ್ಸವ ವೇದಿಕೆ ಯಲ್ಲಿ‌‌ ನೀಡಲಾಗುತ್ತದೆ.