Tagged: Kudla

ವಿಶ್ವ ಚಾಂಪಿಯನ್ ಶಿಪ್ ತಂಡದಲ್ಲಿ ಕುಡ್ಲದ ಪೊಣ್ಣು !

ದೋಹಾದಲ್ಲಿ ನಡೆಯಲಿರುವ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್ ಶಿಪ್ ನ ಭಾರತ ತಂಡದ 25 ಸದಸ್ಯರಲ್ಲಿ ಕುಡ್ಲದ ಓಟಗಾರ್ತಿ ಎಂ.ಆರ್.ಪೂವಮ್ಮ ಆಯ್ಕೆಯಾಗಿದ್ದಾರೆ. ಈಗಾಗಲೇ ಹಲವು ಕ್ರೀಡಾಕೂಟದಲ್ಲಿ ಪದಕ ಗೆದ್ದಿರುವ ಪೂವಮ್ಮ ಮಂಗಳೂರಿನ ಮಂಗಳಾ ಕ್ರೀಡಾಂಗಣದಲ್ಲಿ ಕ್ರೀಡಾ ಬದುಕು ಆರಂಭಿಸಿದವರು.

ತುಳುನಾಡಿನ ಓಲೆ ಬೆಲ್ಲ ಸಿಹಿಯಲ್ಲೂ ಪೂರ್ಣ ಆರೋಗ್ಯ

ಜಗತ್ತಿನ ಬಹುತೇಕ ಹಣ್ಣುಗಳ ರಸ, ಸುವಾಸನೆ ಗಳನ್ನು ಕೃತಕವಾಗಿ ತಯಾರಿಸಬಹುದು. ಆದರೆ, ಓಲೆ ಬೆಲ್ಲ ಮಾತ್ರ ಯಾವುದೇ ಕೃತಕ ವಿಧಾನಗಳಿಂದಲೂ ಸೃಷ್ಟಿಸಲಾಗದ ಅಪ್ಪಟ ದೇಸೀ ಉತ್ಪನ್ನ. ಅಚ್ಚುಬೆಲ್ಲ ಮತ್ತು ನೀರು ನೀಡಿ ಅತಿಥಿಗಳನ್ನು ಸ್ವಾಗತಿಸುವುದು ತುಳುನಾಡಿನ ಜನರ ಸಂಪ್ರದಾಯದ ಒಂದು ಭಾಗವಾದರೆ ಓಲೆಬೆಲ್ಲ ಶಾರೀರಿಕ ಆರೋಗ್ಯದ ವಿಚಾರದಲ್ಲಿ ವಿಶೇಷ ಮಹತ್ವ, ಸ್ಥಾನಮಾನ ಪಡೆದುಕೊಂಡಿದೆ. ಹೆರಿಗೆಯ ಬಳಿಕ ನಡೆಸಬೇಕಾದ ಬಾಣಂತನದಲ್ಲಂತೂ ಓಲೆ ಬೆಲ್ಲವೇ ಪ್ರಧಾನ.
ಅದೂ ಆಧುನಿಕತೆಯ ಈ ಕಾಲದಲ್ಲಯೂ ಸಹ ಉಳಿದುಕೊಂಡಿದೆ. ಕ್ಯಾಲ್ಸಿಯಂ ಹೇರಳವಾಗಿರುವ ಓಲೆಬೆಲ್ಲ ದೇಹದ ಹಲವಾರು ಸಮಸ್ಯೆಗಳಿಗೆ ನಾಟಿ ಹಾಗೂ ಆಯುರ್ವೇದ ಔಷಧಿಯ ರೂಪದಲ್ಲಿ ಬಳಸಲ್ಪಡುತ್ತದೆ. ಬಾಯಿ ಸಿಹಿ ಮಾಡಿಕೊಂಡೇ ಆರೋಗ್ಯ ನೀಡುವ ಓಲೆಬೆಲ್ಲ ನಮಗೆ ಅವಶ್ಯಕವೆನಿಸಿದೆ.

ಪಿಲಿಕುಳದ ‘ರಾಣಿ’ಗೆ ಐದು ಮರಿಗಳು !

ಪಿಲಿಕುಳದ ‘ರಾಣಿ’ಗೆ ಐದು ಮರಿಗಳು ! ಮಂಗಳೂರು: ಪಿಲಿಕುಳ ನಿಸರ್ಗಧಾಮದಲ್ಲಿರುವ ೮ ವರ್ಷದ ರಾಣಿ ಎನ್ನುವ ಹೆಣ್ಣು ಹುಲಿ ಮುದ್ದಾದ 3 ಹೆಣ್ಣು ಹಾಗೂ 2 ಗಂಡು ಮರಿಗಳಿಗೆ ಜನ್ಮ ನೀಡಿದೆ.
ಕೆಲವು ದಿನಗಳ ಹಿಂದೆಯಷ್ಟೇ ರಾಣಿ ಮರಿ ಹಾಕಿದ್ದು, ಎಲ್ಲ ಮರಿಗಳು ಆರೋಗ್ಯವಾಗಿವೆ. ಅವುಗಳಿಗೆ ಸೋಂಕು ಉಂಟಾಗದಂತೆ ಎಚ್ಚರಿಕೆ ವಹಿಸಲಾಗುತ್ತಿದ್ದು, ತಾಯಿ-ಮರಿಗಳನ್ನು ಬೋನಿನಲ್ಲಿಡಲಾಗಿದೆ. ಸದ್ಯ ಸಾರ್ವಜನಿಕರ ವೀಕ್ಷಣೆಗೆ ಅವಕಾಶ ಇರುವುದಿಲ್ಲ. 2-3 ತಿಂಗಳ ಬಳಿಕ ಅವುಗಳಿಗೆ ಚುಚ್ಚು ಮದ್ದು- ಲಸಿಕೆ ನೀಡಿ ಆರೋಗ್ಯ ಪರಿಶೀಲಿಸಿದ ಬೋನಿನಿಂದ ಹೊರ ಬಿಡಲಾಗುವುದು ಎಂದು ಪಿಲಿಕುಳದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ರಾಣಿಯನ್ನು ಮೂರು ವರ್ಷಗಳ ಹಿಂದೆ ಬನ್ನೇರುಘಟ್ಟದಿಂದ ತರಲಾಗಿತ್ತು. ಸದ್ಯ ಮರಿಗಳು ತಾಯಿಯ ಹಾಲನ್ನಷ್ಟೇ ಸೇವಿಸುತ್ತಿದ್ದು, ಕೆಲವೇ ದಿನಗಳಲ್ಲಿ ಮಾಂಸಾಹಾರ ನೀಡಲಾ ಗುತ್ತದೆ. 3 ವರ್ಷಗಳ ಬಳಿಕ ಮರಿಗಳನ್ನು ಬೇರೆ ಮೃಗಾಲಯಗಳಿಗೆ ಕಳು ಹಿಸುವ ಯೋಚನೆಯಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪರಿಸರ ಸ್ನೇಹಿ ಗಣಪನಿಗೆ ಮೊದಲ ವಂದನೆ

ಇತ್ತೀಚಿನ ಕೆಲ ವರ್ಷಗಳಿಂದ ಪರಿಸರ ಸ್ನೇಹಿ ಗಣಪನ ಮೂರ್ತಿಗಳಿಗೆ ಬೇಡಿಕೆ ಹೆಚ್ಚಿದ್ದು, ಇದಕ್ಕೆ ಪೂರಕವಾಗಿ ಇಂತಹ ಗಣೇಶ ವಿಗ್ರಹಗಳಲ್ಲೂ ವೈವಿಧ್ಯತೆ ಕಾಣ ಸಿಗುತ್ತದೆ.
ಮಂಗಳೂರಿನ ಪಕ್ಷಿಕೆರೆಯ ನಿತಿನ್ ವಾಸ್ ಪರಿಸರ ಪೂರಕ ಗಣಪತಿ ಮೂರ್ತಿಯನ್ನು ರಚಿಸುವ ಮೂಲಕ ಗಮನ ಸೆಳೆಯುತ್ತಿದ್ದಾರೆ. ಅವರು ಗಣಪತಿ ಮೂರ್ತಿ ರಚನೆಗೆ ಬಳಸುವುದು ಪರಿಸರ ಸ್ನೇಹಿ ಕಾಗದದ ತಿರುಳು ಮತ್ತು ಬೀಜಗಳನ್ನು. ಇವು ನೀರಿನಲ್ಲಿ ಸುಲಭವಾಗಿ ಕರಗಿ ಹೋಗುತ್ತವೆ, ಹೊರತು ಪ್ರಕೃತಿಗೆ ಮಾರಕವಲ್ಲ.
ಈ ಮೂರ್ತಿಗಳ ರಚನೆಗೆ ನಾನು ಪರಿಸರಕ್ಕೆ ಮಾರಕವಾದ ಯಾವುದೇ ವಸ್ತುಗಳನ್ನು ಬಳಸುವುದಿಲ್ಲ. ಈ ಮೂರ್ತಿಗಳನ್ನು ವಿಸರ್ಜಿಸಿದ ಬಳಿಕ ಬಳಸಲಾಗಿರುವ ಬೀಜಗಳು , ಗಿಡವಾಗಿ ಬೆಳೆಯಬಲ್ಲವು ಎನ್ನುತ್ತಾರೆ ನಿತಿನ್. ಕೇವಲ ಗಣೇಶ ವಿಗ್ರಹ ಅಷ್ಟೇ ಅಲ್ಲ, ಪರಿಸರ ಪ್ರೇಮಿ ನಿತಿನ್ ಗಿಡವಾಗಿ ಅರಳುವ ತ್ರಿವರ್ಣ ಧ್ವಜ, ಪೆನ್ಸಿಲ್, ಪೇಪರ್ ಪೆನ್‌ಗಳನ್ನು ತಯಾರಿಸಿ ಕೂಡ ಗಮನ ಸೆಳೆದಿದ್ದಾರೆ.

ಕುಡ್ಲದ ಮೊದಲ ರಿಕ್ಷಾ ಚಾಲಕಿ ವಿಜಯಕ್ಕ !

ಸುರತ್ಕಲ್ ಪಾರ್ಕ್‌ನಲ್ಲಿ ಸುಮಾರು 10 ವರ್ಷದಿಂದ ರಿಕ್ಷಾ ಚಲಾಯಿಸುತ್ತಿದ್ದ ಹೊಸಬೆಟ್ಟು ನಿವಾಸಿ ದಿ.ಎಚ್.ಟಿ.ಮೂರ್ತಿ ಅವರ ಪತ್ನಿ ಈ ವಿಜಯಲಕ್ಷ್ಮಿ. ಅವರದ್ದು ಬಡ ಕುಟುಂಬ ಬಾಡಿಗೆ ಮನೆಯಲ್ಲಿ ವಾಸ. ಇಬ್ಬರು ಮಕ್ಕಳಿದ್ದಾರೆ.

ಪತಿ ಇತ್ತೀಚೆಗೆ ಹೃದಯಾಘಾತದಿಂದ ನಿಧನರಾಗಿದ್ದರು. ಅವರು ತಾನು ನಿಧನರಾಗುವ ಮೊದಲೇ ಪತ್ನಿಗೆ ರಿಕ್ಷಾ ಚಲಾಯಿಸಲು ಕಲಿಸಿ, ಲೈಸನ್ಸ್ ಕೂಡಾ ಮಾಡಿಸಿಕೊಟ್ಟಿದ್ದರು. ಈಗ ರಿಕ್ಷಾದ ಮೂಲಕ ವಿಜಯಕ್ಕ ಬದುಕು ಕಟ್ಟುತ್ತಿದ್ದಾರೆ.

ರಿಕ್ಷಾ ಬಿಡುವ ಪುರುಷರ ನಡುವೆ ಇಂತಹ ಕ್ಷೇತ್ರದಲ್ಲಿ ವಿಜಯಕ್ಕ ನೆಲೆ ನಿಂತಿರೋದು ಮಾತ್ರ ಖುಷಿಯ ವಿಚಾರ. ವಿಜಯಕ್ಕನ ಬದುಕು ಈ ರಿಕ್ಷಾದಿಂದ ಗಟ್ಟಿಯಾದರೆ ಸಾವಿರಾರು ಮಹಿಳೆಯರು ಇಂತಹ ಕೆಲಸಕ್ಕೆ ಮುಂದಾಗುತ್ತಾರೆ.