Author: Team Kudla City

ಮಾರ್ನೆಮಿಯ ಕುಡ್ಲದ ಪಿಲಿವೇಶ

ನವರಾತ್ರಿ, ಮಹಾನವಮಿ ಎಂದರೆ ಕರಾವಳಿ ಮಂದಿಗೆ ಥಟ್ಟನೆ ಹುಲಿ ವೇಷದ ನೆನಪು. ನವರಾತ್ರಿ ಆರಂಭವಾಗುತ್ತಿದ್ದಂತೆ ಕರಾವಳಿಯಲ್ಲಿ ‘ಡೆರೆಮೆ ಟೆಟ್ಟೆ.. ಡೆರೆಮೆ ಟೆಟ್ಟೆ….’ ತಾರ್ಸೆ(ತಮಟೆ) ಸದ್ದು ಅನುರಣನ. ಥೇಟ್ ಹುಲಿಯಂತೇ ಕಾಣುವ ವೇಷಧಾರಿಗಳಿಂದ ರಸ್ತೆ-ವೃತ್ತಗಳಲ್ಲಿ ವಿಶಿಷ್ಟ ನರ್ತನ.
ಮಂಗಳೂರು ದಸರಾ ವೇಳೆ ರಥಬೀದಿ ವೆಂಕಟರಮಣ ದೇವಸ್ಥಾನ, ಕುದ್ರೋಳಿ ಗೋಕರ್ಣನಾಥೇಶ್ವರ ದೇವಸ್ಥಾನ, ಬೋಳಾರ ಮಂಗಳಾದೇವಿ ದೇವಸ್ಥಾನಗಳಲ್ಲಿ ನವರಾತ್ರಿ ಆರಂಭ ಮತ್ತು ದಸರಾ ಮೆರವಣಿಗೆಗೆ ಹುಲಿವೇಷ ಆಚರಣೆ.
ಮಂಗಳೂರಿನಲ್ಲಿ ಹುಲಿವೇಷದ 40ಕ್ಕೂ ಅಧಿಕ ತಂಡಗಳಿದ್ದು, ಒಂದೊಂದು ತಂಡದಲ್ಲಿ 25 ವೇಷಧಾರಿಗಳವರೆಗೂ ಇರುತ್ತಾರೆ. ಶಾರದೆ ಮೆರವಣಿಗೆ ಮುಗಿದ ಬಳಿಕ ತಂಡಗಳಿಗೆ ‘ಮರ್ಯಾದೆ’ ಹೆಸರಿನ ಗೌರವ. ಈ ಬಿರುದು ಪಡೆಯುವುದು ತಂಡಗಳಿಗೆ ಪ್ರತಿಷ್ಠೆ.
ಕರಾವಳಿಯ ಹುಲಿವೇಷ ವಿಶಿಷ್ಟ. ತಾರ್ಸೆ, ಡೋಲಿನ ಲಯಕ್ಕೆ ವೇಷಧಾರಿಗಳು ಪ್ರದರ್ಶಿಸುವ ಆಟಗಳ ವರಸೆ ಇತರೆಡೆಗಿಂಥ ಭಿನ್ನ. ಇತ್ತೀಚೆಗೆ ರಾಜ್ಯದ ವಿವಿಧೆಡೆಗೂ ಇಲ್ಲಿನ ಹುಲಿವೇಷ ನರ್ತನಕ್ಕೆ ಬೇಡಿಕೆ ಬರುತ್ತಿದೆ. ಇಲ್ಲಿನ ಹುಲಿವೇಷ ತಂಡವೊಂದು ಫ್ರಾನ್ಸ್‌ಗೂ ತೆರಳಿ ಕರಾವಳಿಯ ಜಾನಪದ ಕಲೆ ಪ್ರದರ್ಶಿಸಿ ಬಂದಿದೆ.
ವೇಷಧಾರಿ ತಾಯಿ ಹುಲಿ ಮರಿಗಳಿಗೆ ಬೇಟೆ ಕಲಿಸುವುದು, ಹಾಲುಣಿಸುವುದು, ಮರಿ ಹುಲಿಗಳ ಆಟ, ವಯಸ್ಸಿಗೆ ಬಂದ ಹುಲಿಗಳ ಕಾದಾಟವನ್ನು ಕುಣಿತದಲ್ಲಿಯೇ ಪ್ರದರ್ಶಿಸುತ್ತಾರೆ. ಪಲ್ಟಿ ಹೊಡೆಯುವುದು, ಮೆಣಸಿನ ಹುಡಿ ಕಲಕಿದ ನೀರಿನಿಂದ ಹಿಮ್ಮುಖವಾಗಿ ನಾಣ್ಯ ತೆಗೆಯವುದು, ಝಂಡಾ ಕಸರತ್ತು, ಬಾಯಿಂದ ಜೀವಂತ ಕುರಿ ಕಚ್ಚಿ ಎಸೆಯುವುದು, ‘ಅಕ್ಕಿ ಮುಡಿ’ ಎತ್ತುವ ಕಸರತ್ತು ಹುಲಿವೇಷದ ಗತ್ತು.
ನವರಾತ್ರಿಗೆ ವೇಷ ಧರಿಸುವುದಾದರೆ ಚೌತಿಗೆ ಅಥವಾ ನವರಾತ್ರಿ ಮೊದಲ ದಿನ ತೆಂಗಿನ ಕಾಯಿ, ಅಕ್ಕಿ, ಬಾಳೆಹಣ್ಣು ಇಟ್ಟು, ಗಣಪತಿ ನೆನೆದು ಸಂಕಲ್ಪ ಮಾಡಬೇಕು. ಅಂದು ತಾರ್ಸೆಯವರಿಂದ ಕುಣಿತದ ಅಭ್ಯಾಸ. ಮಕ್ಕಳಾದರೆ ನುರಿತ ಹುಲಿವೇಷಧಾರಿಗಳ ಬಳಿ ಒಂದೆರಡು ವಾರ ಕುಣಿತ ಕಲಿಯುತ್ತಾರೆ. ವೇಷ ಹಾಕುವವರು ಮಾಂಸಾಹಾರ, ಮದ್ಯ ಸೇವಿಸುವಂತಿಲ್ಲ. ಈ ಸಂಪ್ರದಾಯಕ್ಕೆ ಕರಾವಳಿ ಭಾಗದಲ್ಲಿ ಊದು ಹಾಕುವುದು ಎಂಬ ಹೆಸರು.
ಈ ವೇಷ ಬಣ್ಣದ ಮೂಲಕ ಗಮನ ಸೆಳೆಯುತ್ತದೆ. 10-12 ಮಂದಿ ತಂಡಕ್ಕೆ ಬಣ್ಣ ಹಚ್ಚಬೇಕೆಂದರೆ ಇಡೀ ರಾತ್ರಿ ಕೆಲಸ. ಒಬ್ಬ ವೇಷಧಾರಿಗೆ ಬಣ್ಣ ಬಳಿಯಲು 3 ತಾಸು ಬೇಕಾಗುತ್ತದೆ. ಬಣ್ಣ ಹಾಕಲು ವೇಷಧಾರಿ ಮೈಯ ರೋಮವನ್ನೆಲ್ಲ ತೆಗೆಯಬೇಕು. ಇದಕ್ಕೆಲ್ಲ ನುರಿತವರನ್ನು ಮೊದಲೇ ಬುಕ್ ಮಾಡಿಟ್ಟುಕೊಳ್ಳಬೇಕು. ಹಿಂದೆಲ್ಲ ಸಾಂಪ್ರದಾಯಿಕ ಬಣ್ಣ ಬಳಸುತ್ತಿದ್ದರು. ಬಣ್ಣ ವಾರಗಟ್ಟಲೆ ಉಳಿಯಲು ಮೊಟ್ಟೆಯ ಬಿಳಿ ದ್ರವ ಬಳಸುತ್ತಿದ್ದರು. ಈಗ ರಾಸಾಯನಿಕ ಬಣ್ಣವೇ ಗತಿಯಾಗಿದ್ದು, ಬೇಗನೇ ಕಿತ್ತು ಹೋಗುತ್ತದೆ.
ಕುರಿ ಹೊಡೆಯುವ ಆಚರಣೆ ಅಂದುಕೊಂಡಷ್ಟು ಸುಲಭವಲ್ಲ. ಎರಡು ವಾರ ಗೋಣಿಚೀಲದಲ್ಲಿ ಮರಳು ತುಂಬಿಸಿ ಹಲ್ಲುಕಚ್ಚಿ ಎತ್ತುವ ಅಭ್ಯಾಸ ನಡೆಸಬೇಕು. ಇಲ್ಲದೆ ಹೋದರೆ ಹಲ್ಲು ಕಿತ್ತುಹೋಗುತ್ತದೆ. ಹಲ್ಲು ಮುರಿದುಕೊಂಡವರು, ವೇಷ ತ್ಯಜಿಸಿದವರೂ ಇದ್ದಾರೆ.
ಹುಲಿವೇಷ ಕುಣಿತವನ್ನೂ ಹೆಜ್ಜೆ ಆಧರಿಸಿ ಒಂದು ಪೌಲ, ಎರಡು ಪೌಲ… ಎಂಟು ಪೌಲ.. ಕುಣಿತ ಎಂದು ವಿಂಗಡಿಸಲಾಗುತ್ತದೆ. ಕುಳಿತೇ ಕುಣಿಯುವ ಹಾಗೂ ನಿಂತು ಕುಣಿಯುವ ಆಟಗಳಲ್ಲಿ 20ಕ್ಕೂ ಅಧಿಕ ವರಸೆಗಳಿವೆ.

ಮಂಗಳೂರಿನಲ್ಲಿ ಗಾಂಧೀಜಿ ದೇವರು, ನಿತ್ಯವೂ ಪೂಜೆ

ಗರಡಿಯ ವಿವಿಧ ದೈವಗಳ ಹಾಗೆಯೆ ಗಾಂಧೀಜಿಯವರ ಪ್ರತಿಮೆಗೆ ಆರತಿ ಬೆಳಗಲಾಗುತ್ತದೆ, ಪೂಜೆ ಮಾಡಲಾಗುತ್ತಿದೆ. ದೈವಸ್ಥಾನಕ್ಕೆ ಬಂದ ಭಕ್ತರೂ ಗಾಂಧೀಜಿಯನ್ನು ದೇವರ ಸ್ಥಾನದಲ್ಲಿಯೇ ಇಟ್ಟು ನಮಿಸುತ್ತಾರೆ.

ಸತ್ಯವೇ ದೇವರು ಎಂದ ರಾಷ್ಟ್ರಪಿತ ಗಾಂಧೀಜಿಗೆ ಮಂಗಳೂರಿನ ದೈವಸ್ಥಾನದಲ್ಲಿ ನಿತ್ಯವೂ ತ್ರಿಕಾಲ ಪೂಜೆ ನಡೆಯುತ್ತಿದೆ. ಮಂಗಳೂರಿನ ಕಂಕನಾಡಿಯಲ್ಲಿರುವ ಬ್ರಹ್ಮ ಬೈದರ್ಕಳ ಗರಡಿಯಲ್ಲಿ ಗಾಂಧೀಜಿಯವರ ಶ್ವೇತ ವರ್ಣದ ವಿಗ್ರಹವನ್ನು 1948ರಲ್ಲಿಯೇ ಸ್ಥಾಪಿಸಲಾಗಿತ್ತು.

ಅಂದಿನಿಂದ ಇಂದಿನ ವರೆಗೆ ಗರಡಿಯ ವಿವಿಧ ದೈವಗಳ ಹಾಗೆಯೆ ಗಾಂಧೀಜಿಯವರ ಪ್ರತಿಮೆಗೆ ಆರತಿ ಬೆಳಗಲಾಗುತ್ತದೆ, ಪೂಜೆ ಮಾಡಲಾಗುತ್ತಿದೆ. ದೈವಸ್ಥಾನಕ್ಕೆ ಬಂದ ಭಕ್ತರೂ ಗಾಂಧೀಜಿಯನ್ನು ದೇವರ ಸ್ಥಾನದಲ್ಲಿಯೇ ಇಟ್ಟು ನಮಿಸುತ್ತಾರೆ. ಅನೇಕ ಯುವಕ ಯುವತಿಯರೂ ಸಹ ಗಾಂಧೀಜಿಯಿಂದ ಪ್ರೇರಣೆ ಪಡೆಯುವ ಸಲುವಾಗಿಯೇ ಆಗಾಗ ಈ ಮೂರ್ತಿಗೆ ನಮಿಸಿ ಹೋಗುತ್ತಾರೆ.

‘ಪಿಲಿ ಚಡ್ಡಿ’ಗೆ ವಿಶ್ವನಾಥರ ಹೊಲಿಗೆ ಶೈನಿಂಗ್ !

ಹುಲಿವೇಷ ಎಂದಾಕ್ಷಣ ಪುಟ್ಟದಾದ ಚಡ್ಡಿ ಜತೆಗೆ ಮೈ ತುಂಬಾ ಹುಲಿ ಬಣ್ಣ ತಲೆಗೊಂದು ಹುಲಿಯ ಟೋಪಿ ಎಲ್ಲವೂ ಇದ್ದರೆ ಮಾತ್ರ ಹುಲಿವೇಷಕ್ಕೊಂದು ಖದರ್. ಅದರಲ್ಲೂ ಮುಖ್ಯವಾಗಿ ಹುಲಿ ವೇಷಧಾರಿಗಳು ಹಾಕುವ ಚಡ್ಡಿ ನಿಜಕ್ಕೂ ವಿಶೇಷ. ಕಾರಣ ಸರಿಯಾದ ಆಳತೆಯ ಚಡ್ಡಿ ಇಲ್ಲದೇ ಹೋದರೆ ಹುಲಿವೇಷಧಾರಿ ಪಾತ್ರದೊಳಗೆ ಇಣುಕಿ ಕುಣಿಯಲಾರ ಹುಲಿವೇಷದ ಘನತೆ ಹೆಚ್ಚಿಸಲಾರ ಎನ್ನುವುದು ಎಲ್ಲರಿಗೂ ಗೊತ್ತಿರುವ ಸತ್ಯ.

ಅಂದಹಾಗೆ ಕರಾವಳಿಯಲ್ಲಿ ಅದರಲ್ಲೂ ಮುಖ್ಯವಾಗಿ ಮಂಗಳೂರಿನಲ್ಲಿ ‘ಪಿಲಿತ ಚಡ್ಡಿ’ ಹೊಲಿಯುವ ಮಂದಿ ತೀರಾ ಕಡಿಮೆ. ಇದ್ದರೂ ಕೂಡ ಎರಡು ಮೂರು ಮಂದಿ ಮಾತ್ರ ಅದರಲ್ಲಿ ಲೀಡ್ ರೋಲ್‌ನಲ್ಲಿ ಕಾಣಿಸಿಕೊಳ್ಳುವವರು ವಿಶ್ವನಾಥ ಪೂಜಾರಿ. ಕಳೆದ 20 ವರ್ಷಗಳಲ್ಲಿ ಹುಲಿವೇಷಧಾರಿಗಳಿಗೆ ಅತೀ ಹೆಚ್ಚು ಪ್ರಮಾಣದಲ್ಲಿ ಪಿಲಿತ ಚಡ್ಡಿ ಹೊಲಿದವರು ಮಂಗಳೂರಿನ ಭವಂತಿ ಸ್ಟ್ರೀಟ್‌ನಲ್ಲಿರುವ ವಿಶ್ವನಾಥ ಪೂಜಾರಿ ಅವರು ಎನ್ನುವುದು ರೆಕಾರ್ಡ್‌ನಲ್ಲಿ ದಾಖಲಾಗಿರುವ ವಿಷ್ಯಾ.

ವಿಶ್ವನಾಥ ಪೂಜಾರಿ ಅವರು ತಯಾರಿಸುವ ಪಿಲಿ ಚಡ್ಡಿಯಲ್ಲಿ ಎರಡರಿಂದ ಮೂರು ವಿಧಗಳಿವೆ. ಮುಖ್ಯವಾಗಿ ಪಟ್ಟೆ, ಚಿಟ್ಟೆ, ಗ್ರೀನ್ ಬಣ್ಣದ ಚಡ್ಡಿ ಜತೆಗೆ ಕಪ್ಪು ಬಣ್ಣದ ಚಡ್ಡಿಗಳು ಸೇರಿದಂತೆ ಮತ್ತಷ್ಟೂ ಬಣ್ಣಗಳಲ್ಲಿ ಹುಲಿಗಳಿಗೆ ಚಡ್ಡಿ ಹೊಲಿದು ಕೊಡುತ್ತಾರೆ. ಮುಖ್ಯವಾಗಿ ಮುಂಬಯಿಯಿಂದ ಬರುವ ವೆಲ್‌ವೆಟ್ ಬಟ್ಟೆ ಹಾಗೂ ತಮಿಳುನಾಡಿನಿಂದ ಬರುವ ಕೋರಾ ಬಟ್ಟೆಗಳನ್ನು ಬಳಸಿಕೊಂಡು ಪಿಲಿ ಚಡ್ಡಿಗಳನ್ನು ಮಾಡಲಾಗುತ್ತದೆ.

ಆರಂಭದಲ್ಲಿ ಕೋರಾ ಬಟ್ಟೆಯ ಮೇಲೆ ವೆಲ್‌ಬಟ್ಟೆಯನ್ನು ಹಾಕಲಾಗುತ್ತದೆ. 300 ರೂ.ಗಳಲ್ಲಿ ಒಂದು ಪಿಲಿ ಚಡ್ಡಿ ಸಿದ್ಧವಾಗುತ್ತದೆ. ಹೆಚ್ಚಾಗಿ ಬಟ್ಟೆಯನ್ನು ವೇಷಧಾರಿಗಳು ತಂದರೆ ಅದನ್ನು ಆಳತೆಗೆ ತಕ್ಕಂತೆ ಕಟ್ ಮಾಡಿ ಚಡ್ಡಿಯನ್ನು ಸಿದ್ಧ ಮಾಡಲಾಗುತ್ತದೆ. ವಿಶ್ವನಾಥರು ಹೇಳುವಂತೆ ಈ ಹಿಂದೆ ಹುಲಿವೇಷಧಾರಿಗಳು ಕಡಿಮೆ ಪ್ರಮಾಣದಲ್ಲಿದ್ದರು. ಈಗ ವರ್ಷದಿಂದ ವರ್ಷಕ್ಕೆ ಏರುತ್ತಿದ್ದಾರೆ.

ಹುಲಿವೇಷಧಾರಿಗಳಿಗೆ ಚಡ್ಡಿ ಹೊಲಿದು ಕೊಡುವ ಟೈಲರ್‌ಗಳು ಸಿಗುತ್ತಿಲ್ಲ. ಮಂಗಳೂರಿನಲ್ಲಿ ಒಂದೆರಡು ಮಂದಿ ಇದ್ದಾರೆ. ನಾನು ಈಗ ನಾಲ್ಕೈದು ಮಂದಿಗೆ ಆಳತೆ ಕಟ್ ಮಾಡಿ ನೀಡುವ ಮೂಲಕ ಅವರಿಗೆ ತರಬೇತಿ ನೀಡುತ್ತಿದ್ದೇನೆ. ನಾನು ಈ ಕೆಲಸ ಬಿಡಬೇಕು ಎಂದರೂ ಕೂಡ ಹುಲಿವೇಷಧಾರಿಗಳು ನನ್ನನ್ನು ಬಿಡುತ್ತಿಲ್ಲ. ತುಂಬಾನೇ ಸೂಕ್ಷ್ಮ ಹಾಗೂ ತಾಳ್ಮೆಯ ಕೆಲಸವಿದು ಯಾರು ಕೂಡ ಇಂತಹ ಕೆಲಸಕ್ಕೆ ಮುಂದಾಗುತ್ತಿಲ್ಲ ಎನ್ನುತ್ತಾರೆ ಅವರು. ಒಟ್ಟಾರೆ ಪಿಲಿವೇಷಕ್ಕೆ ಚಡ್ಡಿಯ ಮೂಲಕ ವಿಶ್ವನಾಥ ಪೂಜಾರಿ ಅವರು ಹೊಸ ಮೆರಗು ನೀಡುವ ಕೆಲಸವಂತೂ ಮೆಚ್ಚುಗೆ ಪಡೆಯುತ್ತದೆ.

ನವದೇವತೆ- 4 ಕೂಷ್ಮಾಂಡಾ

ಒಂದು ಸಮಯದಲ್ಲಿ ದುರ್ಗಾಮಾತೆ ಸೂರ್ಯನ ಒಳಗೆ ವಾಸಿಸಲು ಆರಂಭಿಸುತ್ತಾಳೆ. ಆಗ ಸೂರ್ಯನಿಂದ ವಿಶ್ವಕ್ಕೆ ಶಕ್ತಿ ಬಿಡುಗಡೆಯಾಗುತ್ತದೆ. ಸೊರ್ಯನೊಳಗೆ ನೆಲೆಸುವಷ್ಟು ಪ್ರಖರವಾದ ದೇವತೆಯಾಕೆ. ಎಂಟು ಕೈಗಳಿರುವ, ಸಿಂಹದ ಮೇಲೆ ಸಂಚರಿಸುವ ಈಕೆ ತನ್ನ ಭಕ್ತರಿಗೆ ಸಿದ್ಧಿ ಹಾಗೂ ಸಂಪತ್ತನ್ನು ಕರುಣಿಸುತ್ತಾಳೆಂಬ ನಂಬಿಕೆಯಿದೆ. ಕೂಷ್ಮಾಂಡಾ ದೇವಿಯ ಪ್ರಸಿದ್ಧ ದೇವಸ್ಥಾನ ಉತ್ತರ ಪ್ರದೇಶದ ಕಾನ್ಪುರ ನಗರದ ಜಿಲ್ಲೆಯ ಘಟಾಂಪುರದಲ್ಲಿದೆ.

ಮಂಗಳೂರು ಹಿಂದಿನ ಶಕ್ತಿ ಮಂಗಳಾದೇವಿ

ಮಂಗಳೂರಿನಿಂದ ಮೂರು ಕಿ.ಮೀ. ದೂರದಲ್ಲಿರುವ ಬೋಳಾರ ಎಂಬಲ್ಲಿ ಮಂಗಳಾದೇವಿ ದೇವಾಲಯವಿದೆ. ಈ ದೇವಾಲಯ ಹಲವು ಬಂದರುಗಳಿಂದ ಸುತ್ತುವರಿಯಲ್ಪಟ್ಟಿದೆ. ಮಂಗಳೂರಿನ ಹೆಸರಿನ ಹಿಂದೆ ದೇವಾಲಯಕ್ಕೆ ಸಂಬಂಧಿಸಿದ ಹೆಸರಿದೆ.
ಅಂದರೆ ಮಂಗಳೂರು ಮಂಗಳ ನಗರವಾಗಿದೆ ಎಂಬ ಅರ್ಥ ಇದೆ. ಈ ದೇವಾಲಯ ೯ನೇ ಶತಮಾನದಲ್ಲಿ ನಿರ್ಮಾಣಗೊಂಡದ್ದಾಗಿದೆ. ತಮಿಳುನಾಡನ್ನು ಆಳುತ್ತಿದ್ದ ಅರಸ ಕುಂದವರ್ಮ ಈ ದೇವಾಲಯವನ್ನು ನಿರ್ಮಿಸಿದ. ದೇವಿ ಮಂಗಳಾದೇವಿ ದೇವಾಲಯದ ಪ್ರಮುಖ ದೇವತೆ. ನವರಾತ್ರಿ ಸಂದರ್ಭದಲ್ಲಿ ಇಲ್ಲಿ ವಿಶೇಷ ಪೂಜೆ ಹಮ್ಮಿಕೊಳ್ಳಲಾಗುತ್ತದೆ.
ನವರಾತ್ರಿ ಉತ್ಸವದ ಒಂಬತ್ತನೇ ದಿನ ಬೃಹತ್ ರಥೋತ್ಸವ ಇಲ್ಲಿ ನಡೆಯುತ್ತದೆ. ದೊಡ್ಡ ಮೆರವಣಿಗೆ ಈ ಸಂದರ್ಭದಲ್ಲಿ ನಡೆಯುತ್ತದೆ. ಬೃಹತ್ ಮೆರವಣಿಗೆಯಲ್ಲಿ ದೇವಿಯನ್ನು ಹೊತ್ತು ಸಾಗುವ ದೃಶ್ಯ ಮನಮೋಹಕವಾಗಿರುತ್ತದೆ. ಉತ್ತಮ ಕಾಲಕ್ಕಾಗಿ ಈ ಸಂದರ್ಭದಲ್ಲಿ ದೇವಿಯನ್ನು ಪ್ರಾರ್ಥಿಸಲಾಗುತ್ತದೆ.
#kudla #Kudlacity #mangalore #navarathri #mangaladevi #kollur #srimokambike #tulunadu #tuluver