ಮಂಗಳೂರಿನ ಕುಡುಪು ದೇವಸ್ಥಾನ, ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ ಇದರ ಜತೆಯಲ್ಲಿ ಮಂಜೇಶ್ವರದ ಅನಂತೇಶ್ವರ ದೇವಸ್ಥಾನ ಮೂರು ದೇವಳದಲ್ಲಿ ನಾಗರ ಪಂಚಮಿ ಎಂದಾಕ್ಷಣ ಬಹಳಷ್ಟು ವಿಶೇಷತೆಗಳಿರುತ್ತದೆ. ಈ ಮೂರು ದೇವಳಗಳು ಕೂಡ ನಾಗನಿಗೆ ವಿಶಿಷ್ಟವಾದ ಸ್ಥಾನಮಾನವಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಸುಬ್ರಹ್ಮಣ್ಯ ಎಂಬ ಗ್ರಾಮದಲ್ಲಿ ಈ ಪ್ರಸಿದ್ಧ ದೇವಾಲಯ ನೆಲೆಸಿದೆ. ಸರ್ಪ ದೋಷ ನಿವಾರಣೆಗಾಗಿ ಈ ದೇವಾಲಯ ದೇಶದಲ್ಲೆ ಪ್ರಖ್ಯಾತವಾಗಿದೆ. ದೇಶದ ನಾನಾ ಮೂಲೆಗಳಿಂದ ಸಾಕಷ್ಟು ಸಂಖ್ಯೆಯಲ್ಲಿ ಭಕ್ತರು ಸರ್ಪ ದೋಷದಿಂದ ಮುಕ್ತಿ ಪಡೆಯಲು ಈ ದೇವಸ್ಥಾನಕ್ಕೆ ಭೇಟಿ ನೀಡುತ್ತಿರುತ್ತಾರೆ. ಇಲ್ಲಿ ಸರ್ಪಗಳ ದೇವರಾಗಿ ಶ್ರೀ ಸುಬ್ರಹ್ಮಣ್ಯ ಸ್ವಾಮಿಯನ್ನು ಮುಖ್ಯ ದೇವತೆಯಾಗಿ ಪೂಜಿಸಲಾಗುತ್ತದೆ. ಸರ್ಪ ದೇವತೆಗಳಾದ ವಾಸುಕಿ ಮತ್ತು ಶೇಷ ನಾಗ ಪ್ರಮುಖ.
ಕುಡುಪು ಶ್ರೀ ಅನಂತ ಪದ್ಮನಾಭ ದೇವಳ ಸರ್ಪ ದೇವಸ್ಥಾನಕ್ಕೆ ಹೆಸರುವಾಸಿಯಾಗಿದೆ. ಈ ದೇವಸ್ಥಾನವು ಕರಾವಳಿಯ ಪ್ರಮುಖ ನಾಗ ಕ್ಷೇತ್ರಗಳಲ್ಲಿ ಒಂದಾಗಿದೆ. ನಾಗರ ಪಂಚಮಿಯಂದು ಲಕ್ಷಾಂತರ ಸಂಖ್ಯೆಯಲ್ಲಿ ಭಕ್ತರು ಇಲ್ಲಿಗೆ ಆಗಮಿಸುತ್ತಾರೆ. ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ನಡೆಯುವ ಸೇವೆಗಳೆಲ್ಲವನ್ನೂ ಮಂಜೇಶ್ವರ ಶ್ರಿಮದ್ ಅನಂತೇಶ್ವರ ದೇವಸ್ಥಾನದಲ್ಲಿ ನಡೆಸಲಾಗುತ್ತಿದೆ. ಇಲ್ಲಿ ವಿಷ್ಣು, ಈಶ್ವರ ಹಾಗೂ ನಾಗ ದೇವರ ಸಾನಿಧ್ಯವಿದೆ. ನಾಗರ ಪಂಚಮಿ ಹಾಗೂ ಷಷ್ಠಿ ಮಹೋತ್ಸವ ಇಲ್ಲಿನ ಪ್ರಧಾನ ಆಚರಣೆಗಳು.