Tagged: newscity

ಬಿಜಿಎಸ್ ಶಿಕ್ಷಣ ಸಂಸ್ಥೆ ಪರಿಸರ ಸ್ನೇಹಿ

ಕಾವೂರಿನಲ್ಲಿರುವ ಬಿಜಿಎಸ್ ಶಿಕ್ಷಣ ಸಂಸ್ಥೆಯ ವಿಶೇಷ ಎಂದರೆ ಅಲ್ಲಿ ಶಿಕ್ಷಣ, ಮಾನವೀಯ ಮೌಲ್ಯಗಳನ್ನು ಕಲಿಸುವ ಕೆಲಸವನ್ನು ಮಾತ್ರ ಮಾಡುತ್ತಿಲ್ಲ. ಬದಲಾಗಿ ಇಡೀ ಬಿಜಿಎಸ್ ಶಿಕ್ಷಣ ಸಂಸ್ಥೆ ಪರಿಸರದ ಕುರಿತು ಕಾಳಜಿಯನ್ನು ಇಟ್ಟುಕೊಂಡಿದೆ. ಮರ, ಗಿಡಗಳ ಜತೆಗೆ ಪರಿಸರ ಪೂರಕ ವಾತಾವರಣ ವಿದ್ಯಾರ್ಥಿಗಳ ಶೈಕ್ಷಣಿಕ ಬದುಕಿಗೆ ಪೂರಕವಾಗಿದೆ.

ವಿಶೇಷವಾಗಿ ಬಿಜಿಎಸ್ ವಿದ್ಯಾಸಂಸ್ಥೆಯ ಕಾರ್ಯದರ್ಶಿ ಶ್ರೀ ಧರ್ಮಪಾಲನಾಥ ಸ್ವಾಮೀಜಿ ಅವರು ಹೇಳುವಂತೆ ಪರಿಸರ ಸಂರಕ್ಷಣೆ ನಮ್ಮೆಲ್ಲರ ಆದ್ಯ ಕರ್ತವ್ಯ. ಗಿಡ- ಮರ ಬೆಳೆಸುವ ಕಾರ್ಯ ಪ್ರತಿಯೊಬ್ಬರ ಮನೆಯಂಗಳದಿಂದ ಪ್ರಾರಂಭವಾಗಬೇಕು. ಪ್ರಕೃತಿಯು ದೇವರಿಗೆ ಸಮಾನ, ಇದನ್ನು ಕಾಪಾಡಿದರೆ ದೇವರ ಅನುಗ್ರಹ ಲಭಿಸುತ್ತದೆ. ಹೇಗೆ ಮರ, ನದಿ, ಪ್ರಾಣಿ ಪಕ್ಷಿಗಳು ಪರರಿಗಾಗಿ ತಮ್ಮನ್ನು ಸಮರ್ಪಣೆ ಮಾಡಿಕೊಳ್ಳುತ್ತವೆಯೋ ಹಾಗೆ ಮನುಷ್ಯನಾಗಿ ಹುಟ್ಟಿದ ಮೇಲೆ ಸ್ವಾರ್ಥವನ್ನು ಬಿಟ್ಟು ಮರಗಿಡಗಳನ್ನು ಬೆಳೆಸಬೇಕು.

ಜಗತ್ತಿನಾದ್ಯಂತ ಪರಿಸರ ಮಲೀನವಾಗುತ್ತಿದೆ. ಇದರ ಬಗ್ಗೆ ಮಕ್ಕಳಲ್ಲಿ ಜಾಗೃತಿ ಮೂಡಿಸುವ ಅವಶ್ಯಕತೆ ಇದೆ. ಆ ನಿಟ್ಟಿನಲ್ಲಿ ಮಕ್ಕಳ ಹುಟ್ಟುಹಬ್ಬದ ದಿನದಂದು ಒಂದೊಂದು ಗಿಡ ನೆಟ್ಟು ಬೆಳಸಬೇಕು ಎನ್ನುವುದು ಅವರ ಮಾತು. ವಿಶೇಷವಾಗಿ ಪರಿಸರದ ದಿನಾಚರಣೆಯ ಅಂಗವಾಗಿ ಈಗಾಗಲೇ ಬಿಜಿಎಸ್ ಶಿಕ್ಷಣ ಸಂಸ್ಥೆಯಲ್ಲಿ ಮಕ್ಕಳಿಗೆ ಪರಿಸರ ಜಾಗೃತಿ, ಮಾಹಿತಿ ನೀಡುವ ಕಾರ‍್ಯ ಸಾಗುತ್ತಿದೆ.

ಕೂಳೂರು ಸೇತುವೆ ಕಮಾನು ಶಿಥಿಲ: ಘನ ವಾಹನ ಫುಲ್ ಸ್ಟಾಪ್

ಮಂಗಳೂರಿನ ಕೂಳೂರು ಪಾಲ್ಗುಣಿ ನದಿಗೆ ಅಡ್ಡಲಾಗಿ ಕಟ್ಟಿರುವ ಕಮಾನು ಸೇತುವೆ ತುಂಬಾ ಹಳೆಯದಾಗಿದ್ದು, ಶಿಥಿಲಾವಸ್ಥೆಯಲ್ಲಿರುವುದರಿಂದ ಹೊಸ ಸೇತುವೆ ನಿರ್ಮಾಣ ಕಾಮಗಾರಿ ಮುಗಿಯುವವರೆಗೆ ತಾತ್ಕಾಲಿಕವಾಗಿ ಸೇತುವೆಯಲ್ಲಿ ಘನ ವಾಹನಗಳ ಸಂಚಾರವನ್ನು ನಿರ್ಬಂಧಿಸಲಾಗಿದೆ.

ಪರ್ಯಾಯ ಮಾರ್ಗವಾಗಿ ಉಡುಪಿಯಿಂದ ಬೆಂಗಳೂರು ಕಡೆಗೆ ಹೋಗುವ ಮತ್ತು ಬೆಂಗಳೂರಿನಿಂದ ಎಂಆರ್‌ಪಿಎಲ್ ಉಡುಪಿ ಕಡೆಗೆ ಬರುವ ಬುಲೆಟ್ ಟ್ಯಾಂಕರ್‌ಗಳನ್ನು ಪಡುಬಿದ್ರೆ, ಕಾರ್ಕಳ- ಗುರುವಾಯನ ಕೆರೆ- ಧರ್ಮಸ್ಥಳ ಕೊಕ್ಕಡ-ಪೆರಿಯಶಾಂತಿ ಮೂಲಕ ಸಂಚರಿಸುವುದು.

ಕೇರಳ ರಾಜ್ಯದಿಂದ ಉಡುಪಿ ಕಡೆಗೆ ಬರುವ ಬುಲೆಟ್ ಟ್ಯಾಂಕರ್‌ಗಳು ಕೆಪಿಟಿ ಯಿಂದ ಕಾವೂರು ಬಜಪೆ ಕಾನ ಸುರತ್ಕಲ್ ಮೂಲಕ ಸಂಚರಿಸುವುದು. ಘನ ವಾಹನಗಳಾದ ಲಾರಿ ಬಸ್ ಟ್ಯಾಂಕರ್‌ಗಳಿಗೆ ಕೂಳೂರು ಹೊಸ ಸೇತುವೆಯ ಮೂಲಕ ದ್ವಿಮುಖ ಸಂಚಾರ ವ್ಯವಸ್ಥೆ ಕಲ್ಪಿಸಲಾಗುತ್ತದೆ.

ಲಘು ವಾಹನಗಳಾದ ಕಾರು ಜೀಪು, ಟೆಂಪೊ, ಆಟೋ ರಿಕ್ಷಾ ಹಾಗೂ ದ್ವಿಚಕ್ರ ವಾಹನಗಳನ್ನು ಹಳೆಯ ಕಮಾನು ಸೇತುವೆಯ ಮೂಲಕ ದ್ವಿಮುಖವಾಗಿ ಸಂಚರಿಸುವ ವ್ಯವಸ್ಥೆ ಕಲ್ಪಿಸುವಂತೆ ಜಿಲ್ಲಾಧಿಕಾರಿ ಎಸ್ ಸಸಿಕಾಂತ್ ಸೆಂಥಿಲ್ ಸಂಬಂಧಪಟ್ಟ ಅಧಿಕಾರಿಗಳಿಗೆ ಆದೇಶ ನೀಡಿದ್ದಾರೆ.

ರಸ್ತೆಯಲ್ಲಿ ವಾಹನ ಸಂಚಾರ ವ್ಯವಸ್ಥೆಯ ಬಗ್ಗೆ ಅವಶ್ಯವಿರುವ ಸೂಚನಾ ಫಲಕ ಅಳವಡಿಸಿ ಸಾರ್ವಜನಿಕರಿಗೆ ತಿಳುವಳಿಕೆ ನೀಡಲು ಯೋಜನಾ ನಿರ್ದೇಶಕರು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮಂಗಳೂರು ಅವರಿಗೆ ಸೂಚಿಸಲಾಗಿದೆ. ಸಂಚಾರ ನಿಯಂತ್ರಣ ಸಿಬ್ಬಂದಿಗಳನ್ನು ನೇಮಕಗೊಳಿಸಲು ಪೊಲೀಸ್ ಆಯುಕ್ತರು, ಮಂಗಳೂರು ನಗರ ಅವರು ಮತ್ತು ಪೊಲೀಸ್ ಅಧೀಕ್ಷಕರು ದಕ್ಷಿಣ ಕನ್ನಡ ಜಿಲ್ಲೆ ಮಂಗಳೂರು ಅವರು ತಮ್ಮ ವ್ಯಾಪ್ತಿಯಲ್ಲಿ ಮೋಟಾರ್ ವಾಹನ ಕಾಯಿದೆ ಹಾಗೂ ಕರ್ನಾಟಕ ಮೋಟಾರ್ ವಾಹನ ನಿಯಮಾವಳಿ ಪ್ರಕಾರ ಅಧಿಕಾರವುಳ್ಳವರಾಗಿರುತ್ತಾರೆ.