Tagged: mangalorecity

ತರಕಾರಿ ಕೆಡದಂತೆ ಕೋಟಿಂಗ್ ಪ್ಲ್ಯಾನ್ !

ತರಕಾರಿಯೊಂದನ್ನು ನಾಲ್ಕೈದು ದಿನಕ್ಕಿಂತ ಹೆಚ್ಚು ಕಾಲ ಕೆಡದಂತೆ ಸಂರಕ್ಷಿಸುವುದು ಕಷ್ಟ ಆದರೆ ಪುತ್ತೂರಿನ 15 ರ ಹರೆಯದ ಅಮೋಘ ನಾರಾಯಣ ವೆಜಿಟೇಬಲ್ ಕೋಟಿಂಗ್‌ಗೆ ನೈಸರ್ಗಿಕ ವಿಧಾನದ ಯಶಸ್ವಿ ಪ್ರಯೋಗ ಮಾಡಿದ್ದು, ಅದಕ್ಕೀಗ ಪೇಟೆಂಟ್ ಪಡೆಯಲು ನಿರ್ಧರಿಸಿದ್ದಾರೆ. ಮೂಡುಬಿದಿರೆಯಲ್ಲಿ ವ್ಯಾಸಾಂಗ ಮಾಡುತ್ತಿದ್ದಾರೆ.

ಅಮೋಘ ಬದನೆ ಕಾಯಿಗೆ ಬೀಂಪುಳಿ ಎಂಬ ಮರದ ಎಲೆಯನ್ನು (ಬಿಲಿಂಬಿ ಲೀವ್ಸ್) ಬಳಸಿಕೊಂಡು ಅದರ ನಿರ್ದಿಷ್ಟ ಅಂಶವನ್ನು ಪಡೆದುಕೊಂಡು ತಯಾರಿಸಿದ ದ್ರಾವಣದಲ್ಲಿ ಬದನೆಯನ್ನು ಒಂದು ಗಂಟೆ ಮುಳುಗಿಸಿಡಲಾಯಿತು.
ಈ ಪರಿಸರ ಸ್ನೇಹಿ ಕ್ರಿಯೆಗೆ ಒಳಪಟ್ಟ ಬದನೆ 12 ದಿನಗಳ ಕಾಲ ಕೆಡದಂತೆ, ಹಣ್ಣಾಗದಂತೆ ಸ್ಥಿತಪ್ರಜ್ಞವಾಗಿತ್ತು. ಎನ್‌ಐಟಿಕೆ ಸೇರಿದಂತೆ ನಾನಾ ಕಡೆ ಈ ಪ್ರಯೋಗದ ವೈಜ್ಞಾನಿಕ ಪರೀಕ್ಷೆ ನಡೆಸಿ ಯಶಸ್ವಿ ಫಲಿತಾಂಶ ಪಡೆಯಲಾಯಿತು.

ಅಮೆರಿಕದಲ್ಲಿ ಜೂ.17ರಿಂದ 22 ರತನಕ ನಡೆಯಲಿರುವ ’ಜೀನಿಯಸ್ ಒಲಿಂಪಿಯಾಡ್’ ಅಂತಾರಾಷ್ಟ್ರೀಯ ವಿಜ್ಞಾನ ಮೇಳಕ್ಕೆ ಆಯ್ಕೆಯಾಗಿರುವ ಅಮೋಘ ನಾರಾಯಣ, ಭಾರತೀಯ ಬಾಹ್ಯಾಕಾಶ ಸಂಶೋಧನಾ ಕೇಂದ್ರ (ಇಸ್ರೋ) ನೀಡುವ ಯುವ ವಿಜ್ಞಾನಿ ತರಬೇತಿ ಕಾರ್ಯಕ್ರಮ ‘ಯುವಿಕಾ: 2019’ಕ್ಕೆ ಕೂಡ ಆಯ್ಕೆಯಾಗಿದ್ದಾರೆ.

ಮಂಗಳೂರು ಸರ್ಫಿಂಗ್ ಉತ್ಸವ ಈ ಬಾರಿ ಡೌಟ್

ಪ್ರವಾಸೋದ್ಯಮ ಅಭಿವೃದ್ಧಿ ಹಿನ್ನೆಲೆಯಲ್ಲಿ ಬಜೆಟ್‍ನಲ್ಲೇ ಘೊಷಣೆಯಾಗಿದ್ದ `ಮಂಗಳೂರು ಸರ್ಫಿಂಗ್ ಉತ್ಸವ’ಕ್ಕೆ ರಾಜ್ಯ ಪ್ರವಾಸೋದ್ಯಮ ಇಲಾಖೆಯಿಂದ ಇದುವರೆಗೆ ಯಾವುದೇ ಸ್ಪಂದನೆ ಸಿಗದ ಕಾರಣ ಸತತ ಎರಡನೇ ವರ್ಷ ಕಾರ್ಯಕ್ರಮವನ್ನು ರದ್ದುಪಡಿಸಲಾಗಿದೆ.

ರಾಜ್ಯ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಕಳೆದ ವರ್ಷ ನಿಂತು ಹೋಗಿದ್ದ ಮಂಗಳೂರು ಸರ್ಫಿಂಗ್ ಉತ್ಸವವನ್ನು ಈ ಬಾರಿ ಲೋಕಸಭೆ ಚುನಾವಣೆ ಇದ್ದರೂ ನಡೆಸಲು ಜಿಲ್ಲಾಡಳಿತ ತಯಾರಿ ನಡೆಸಿತ್ತು. ಆದರೆ ರಾಜ್ಯ ಪ್ರವಾಸೋದ್ಯಮ ಇಲಾಖೆ ಸರ್ಫಿಂಗ್ ಉತ್ಸವ ನಡೆಸಲು ಆಸಕ್ತಿ ವಹಿಸದ ಕಾರಣ ಅಂತಾರಾಷ್ಟ್ರೀಯ ಮಟ್ಟದ ಕಾರ್ಯಕ್ರಮವೊಂದನ್ನು ಆಯೋಜನೆ ಮಾಡುವ ಅವಕಾಶದಿಂದ ಮಂಗಳೂರು ವಂಚಿತವಾಗಿದೆ.

ಮಂಗಳೂರು ಹೊರವಲಯದ ಸಸಿಹಿತ್ಲು ಕಡಲ ಕಿನಾರೆಯಲ್ಲಿ ಸರ್ಫಿಂಗ್ ಉತ್ಸವ ನಡೆಸುವ ಬಗ್ಗೆ ದಕ್ಷಿಣ ಕನ್ನಡ ಜಿಲ್ಲಾ ಪ್ರವಾಸೋದ್ಯಮ ಇಲಾಖೆ ವತಿಯಿಂದ ಜಿಲ್ಲಾಡಳಿತ ಮೂಲಕ ಕಳೆದ ಜನವರಿಯಲ್ಲೇ ಪ್ರಸ್ತಾವನೆ ಕಳುಹಿಸಲಾಗಿತ್ತು. ಇದಕ್ಕೆ ಬೇಕಾಗುವ ಅನುದಾನವನ್ನು ಬಿಡುಗಡೆ ಮಾಡುವಂತೆ ಕೋರಲಾಗಿತ್ತು. ಆದರೆ ರಾಜ್ಯ ಸರಕಾರ ಹಾಗೂ ಪ್ರವಾಸೋದ್ಯಮ ಇಲಾಖೆಯಿಂದ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ಜಿಲ್ಲಾಡಳಿತಕ್ಕೆ ಬಂದಿಲ್ಲ.

ಕುಡ್ಲದ ರಿಕ್ಷಾ ಚಾಲಕರ ಸಿಟಿ ಇನ್ಪೋ ಟ್ಯಾಬ್ !

ಕುಡ್ಲದ ರಿಕ್ಷಾ ಚಾಲಕರು ಡಿಜಿಟಲ್ ವಿಚಾರದಲ್ಲೂ ಸಾಕಷ್ಟು ಸ್ಮಾರ್ಟ್ ಆಗಿರುವುದು ಗೊತ್ತಿರುವ ವಿಚಾರ. ಈ ಹಿಂದೆ ರಿಕ್ಷಾಗಳಿಗೆ ಪೇಟಿಎಂ ಮಾಡುವ ಮೂಲಕ ಮಾದರಿಯಾದ ಕುಡ್ಲದ ರಿಕ್ಷಾ ಚಾಲಕರು ಟ್ಯಾಬ್ ಅಳವಡಿಸುವ ಕೆಲಸದಿಂದಲ್ಲೂ ದೇಶದಲ್ಲಿ ಮೊದಲ ಟ್ಯಾಬ್ ಅಳವಡಿಸಿದ ಕೆಲಸಕ್ಕೆ ಭಾಜನರಾಗಿದ್ದಾರೆ. ಕುಡ್ಲದ ಕೆಲವು ರಿಕ್ಷಾಗಳು ಈಗಾಗಲೇ ಟ್ಯಾಬ್ ಆಳವಡಿಸಿಕೊಂಡಿದ್ದಾರೆ.
ರಿಕ್ಷಾದಲ್ಲಿ ಅಳವಡಿಸಿಕೊಂಡಿರುವ ಟ್ಯಾಬ್‌ನಲ್ಲಿ ಕರಾವಳಿಯ ದೇವಸ್ಥಾನ, ಮಸೀದಿ, ಚರ್ಚ್, ಹೋಟೆಲ್‌ಗಳ ವಿವರ, ಮಾಲ್, ಪ್ರವಾಸಿ ತಾಣಗಳು ಸೇರಿದಂತೆ ಸಂಪೂರ್ಣ ಮಾಹಿತಿಗಳು ಸಿಗಲಿದೆ. ದೇವಸ್ಥಾನ ಕ್ಲಿಕ್ ಮಾಡಿದಾಕ್ಷಣ ದೇವಸ್ಥಾನದ ಇತಿಹಾಸ, ಪ್ರಯಾಣದ ವಿವರ, ತಂಗಲು ಇರುವ ವ್ಯವಸ್ಥೆ, ಪೂಜಾ ಸಮಯದ ಟೈಮ್ ಟೇಬಲ್ ಇತ್ಯಾದಿಗಳನ್ನು ನೀಡಲಾಗಿದೆ.

ಉದಾಸೀನತೆಗೆ ದೂಡಿದ ಮಳೆರಾಯನ ಆಟ !

ಕರಾವಳಿಯ ನಾನಾ ಭಾಗದಲ್ಲಿ ಕಳೆದ ಒಂದೆರಡು ದಿನಗಳಲ್ಲಿ ಒಂಚೂರು ಮಳೆ ಬಂದು ಇಳೆಯನ್ನು ತಣ್ಣಗೆ ಮಾಡಿದ ಪ್ರಸಂಗಗಳು ನಡೆದರೆ ಮಂಗಳೂರಿನಲ್ಲಿ ಮಾತ್ರ ಮೋಡ ಕವಿದ ವಾತಾವರಣದ ಜತೆಗೆ ಮಳೆರಾಯನ ಆಟ ಮುಂಜಾನೆ ಎದ್ದು ಆಕಾಶ ನೋಡುವ ಜನರಿಗೆ ಉದಾಸೀನತೆಯ ಭಾವವನ್ನು ಮೂಡಿಸಿದೆ.
ಅಷ್ಟಕ್ಕೂ ಮಂಗಳೂರು ಸಿಟಿ ಲಿಮಿಟ್‌ನೊಳಗೆ ಕೆಲವು ಕಡೆಯಲ್ಲಿ ಮಳೆಯಾದರೆ ಕುಡ್ಲದ ಪ್ರಮುಖ ಭಾಗದಲ್ಲಿ ಮಳೆಯ ಹನಿಯೇ ಬಿದ್ದಿಲ್ಲ. ಸಿಟಿ ಜನ ಉರಿಬಿಸಿಲಿಗೆ ಬೆವರು ಸುರಿಸುತ್ತಾ ಮಂಗಳೂರಿನಲ್ಲಿ ಭರ್ಜರಿ ಒಂದು ಮಳೆ ಬರಲಿ ಎನ್ನುವ ನಿರೀಕ್ಷೆಯಲ್ಲಿ ಕಾದು ಕೂತಿದ್ದಾರೆ. ದೇವಸ್ಥಾನ, ಚರ್ಚ್‌ಗಳಲ್ಲಿ ಈಗಾಗಲೇ ಮಳೆಗಾಗಿ ವಿಶೇಷ ಪ್ರಾರ್ಥನೆಗಳು ಆರಂಭವಾಗಿದೆ. ಆದರೂ ಮಳೆರಾಯ ಮುನಿಸಿಕೊಂಡು ಸುಮ್ಮನಾಗಿ ಬಿಟ್ಟಿದ್ದಾನೆ.

ಕದ್ರಿ ಬ್ರಹ್ಮಕಲಶಕ್ಕೆ ರಿಕ್ಷಾ ಚಾಲಕರ ವಿಶಿಷ್ಟ ಸೇವೆ

ವಿಶ್ವಹಿಂದೂ ಪರಿಷತ್ ಬಜರಂಗದಳ ಆಟೋ ಚಾಲಕರ ಮಾಲಕರ ಘಟಕ ವತಿಯಿಂದ ಶ್ರೀ ಕ್ಷೇತ್ರ ಕದ್ರಿ ಬ್ರಹ್ಮಕಲಶದ ಅಂಗವಾಗಿ ಮೇ 9 ರಂದು ಬೆಳಗ್ಗೆ 10 ರಿಂದ ಸಂಜೆ 4 ರವರೆಗೆ ಉಚಿತ ಆಟೊರಿಕ್ಷಾ ಸೇವೆ ಸಿಗಲಿದೆ.
ಘಟಕದ ನೂರು ರಿಕ್ಷಾ ಚಾಲಕರು ಕೆಪಿಟಿ ಬಳಿಯಿಂದ, ಬಂಟ್ಸ್ ಹಾಸ್ಟೆಲ್‌ನಿಂದ, ಮಲ್ಲಿಕಟ್ಟೆಯಿಂದ ದೇವಸ್ಥಾನಕ್ಕೆ ಉಚಿತವಾಗಿ ಕರೆದುಕೊಂಡು ಹೋಗಿ ಬಿಡುವ ಹಾಗೂ ದೇವಸ್ಥಾನದಿಂದ ಸಮೀಪದ ಬಸ್ ನಿಲ್ದಾಣಗಳಿಗೆ ಬಿಡುವ ವ್ಯವಸ್ಥೆ ಮಾಡಲಾಗಿದೆ.

ಈ ಮೂಲಕ ಮಂಗಳೂರಿನ ರಿಕ್ಷಾ ಚಾಲಕರು ಕದ್ರಿ ಶ್ರೀಮಂಜುನಾಥ ದೇವರ ಭಕ್ತರಿಗೆ ಪ್ರೀತಿಯ ಸೇವೆ ನೀಡುವ ಮೂಲಕ ವಿಶೇಷ ಸೇವೆ ಮಾಡುತ್ತಿದ್ದಾರೆ.