Tagged: kudlacity

ಕುಡ್ಲದ ರಿಕ್ಷಾವನ್ನು ಇಷ್ಟಪಟ್ಟ ಜರ್ಮನಿಗರು !

ಎಲ್ಲಿಯ ಕುಡ್ಲ ಎಲ್ಲಿಯ ಜರ್ಮನಿ ಮಾರಾಯ್ರೆ. ವಿಶ್ವ ಪರ್ಯಟನೆ ಅಂಗವಾಗಿ ಜರ್ಮನಿಯಿಂದ ಮಂಗಳೂರಿಗೆ ಆಗಮಿಸಿದ ವಿದೇಶಿ ಪ್ರವಾಸಿಗರ ಐಷಾರಾಮಿ ಹಡಗು ಐಡಾ ವೀಟಾದಲ್ಲಿ ಬಂದ ಬಹುತೇಕ ಪ್ರವಾಸಿಗರು ಕುಡ್ಲದ ರಿಕ್ಷಾದಲ್ಲಿಯೇ ಊರೂರು ಸುತ್ತುವ ಕೆಲಸಕ್ಕೆ ಮುಂದಾಗಿದ್ದಾರೆ.

ನಗರದ ದರ್ಶನ ಮಾಡಿಸಲು ಇದಕ್ಕಾಗಿ 63 ಆಟೋ ರಿಕ್ಷಾಗಳ ವ್ಯವಸ್ಥೆ ಮಾಡಲಾಗಿದೆ. ಖಾಸಗಿ ಲೋಟಸ್ ಟೂರಿಸ್ಟ್ ಸಂಸ್ಥೆ ಮೂಲಕ ಆಟೊಗಳನ್ನು ಬಂದರಿನ ಒಳಗೆ ಆಗಮಿಸಲು ಅವಕಾಶ ಕಲ್ಪಿಸಲಾಗಿತ್ತು. ಆಟೊಗಳನ್ನು ಸಾಲಾಗಿ ನಂಬರ್ ಹಾಕಿ ನಿಲ್ಲಿಸಲಾಗಿತ್ತು. ಒಟ್ಟು 1,154 ಪ್ರವಾಸಿಗರಲ್ಲಿ 1೦೦ಕ್ಕೂ ಹೆಚ್ಚು ಪ್ರವಾಸಿಗರು ಆಟೊಗಳನ್ನೇ ಆಯ್ಕೆ ಮಾಡಿಕೊಂಡು, ನಗರದ ಪ್ರವಾಸಿ ತಾಣಗಳ ದರ್ಶನ ಮಾಡಿದರು.

ಉರ್ವಾದ ರೈಸ್ ಮಿಲ್, ಬೈಕಂಪಾಡಿಯ ಗೇರುಬೀಜ ಕಾರ್ಖಾನೆ, ಸೆಂಟ್ರಲ್ ಮಾರುಕಟ್ಟೆ, ಮೀನು ಮಾರುಕಟ್ಟೆ, ಹೋಟೆಲ್ ತಾಜ್ ಗೇಟ್‌ವೇಯಲ್ಲಿ ಊಟ ಮತ್ತು ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನ ಹೀಗೆ ಮಂಗಳೂರಿನ ನಾನಾ ಕಡೆಯಲ್ಲಿ ವಿದೇಶಿಗರು ಹೆಚ್ಚಿನ ಸಂಖ್ಯೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದರಿಂದ ಕುಡ್ಲದ ರಿಕ್ಷಾ ಡ್ರೈವರ್‌ಗಳಿಗೆ ಈ ಬಾರಿ ಡಾಲರ್ ಕರೆನ್ಸಿಯ ನೋಟುಗಳು ಟಿಪ್ಸ್‌ಗಳಾಗಿ ಸಿಗುವ ಸಾಧ್ಯತೆಯಿದೆ.

ರಸ್ತೆಯ ಹೊಂಡ ಮುಚ್ಚಿದ ಟ್ರಾಫಿಕ್ ಪೊಲೀಸ್ ಪುಟ್ಟರಾಮ

ಕರಾವಳಿಯ ಯಾವ ರಸ್ತೆಯನ್ನು ನೋಡಿದರೂ ಕೂಡ ಅಲ್ಲಿ ಹೊಂಡಗಳೇ ಕಾಣಿಸಿಕೊಳ್ಳುತ್ತಿದೆ. ಸವಾರರಂತೂ ಜೀವವನ್ನು ಕೈಯಲ್ಲಿ ಹಿಡಿದುಕೊಂಡೇ ಸಾಗಬೇಕಾದ ಸ್ಥಿತಿ ಜಿಲ್ಲೆಯಲ್ಲಿ ಕಾಣಿಸಿಕೊಂಡಿದೆ. ವಿಶೇಷ ಎಂದರೆ ಈ ರಸ್ತೆಯಲ್ಲಿ ಹೊಂಡಗಳು ಸ್ಮಾರ್ಟ್ ಸಿಟಿ ಕುಡ್ಲದಲ್ಲೂ ಭರ್ಜರಿಯಾಗಿದೆ.

ಮಂಗಳೂರಿನ ಬಂಟ್ಸ್‌ಹಾಸ್ಟೆಲ್ ಸರ್ಕಲ್ ಸಮೀಪ ರಸ್ತೆಯಂಚಿನಲ್ಲಿದ್ದ ಗುಂಡಿಯೊಂದು ದ್ವಿಚಕ್ರ ಸವಾರರಾಗಿ ಕಂಟಕವಾಗಿದ್ದು ಈ ಬಗ್ಗೆ ಮನಪಾ ಅಧಿಕಾರಿಗಳ ಗಮನಕ್ಕೆ ತಂದರೂ ಸುಧಾರಣೆಯಾಗದಿರುವುದರಿಂದ ಬೇಸತ್ತ ಪೂರ್ವ ಸಂಚಾರಿ ಠಾಣೆ (ಕದ್ರಿ) ಯ ಸಿಬ್ಬಂದಿ ಪುಟ್ಟರಾಮ ತಾನೇ ಕಲ್ಲು, ಮಣ್ಣು ಹಾಕಿಕೊಂಡು ಮುಚ್ಚುವ ಮೂಲಕ ವಿಶೇಷವಾದ ಕೆಲಸವನ್ನು ಮಾಡಿ ವಾಹನ ಸವಾರರ ಮನಸ್ಸು ಗೆದ್ದುಬಿಟ್ಟಿದ್ದಾರೆ.

ದೀಪಾವಳಿ ಹಬ್ಬದ ಇಮ್ಮಡಿ ಮಾಡುವ ಗೂಡುದೀಪ

ತುಳುನಾಡಿನಲ್ಲಿ ಗೂಡುದೀಪಗಳಿಗೆ ವಿಶಿಷ್ಟವಾದ ಪರಂಪರೆ ಇದೆ. ದೀಪಾವಳಿ ಸಂದರ್ಭದಲ್ಲಿ ತುಳುನಾಡಿನ ಜನತೆ ಗೂಡುದೀಪಗಳನ್ನು ಮನೆ ಮನೆಗಳಲ್ಲಿ ರಚಿಸಿ ಬೆಳಗಿಸುವ ಮೂಲಕ ಸಂಭ್ರಮವನ್ನು ಇಮ್ಮಡಿ ಮಾಡಿಕೊಳ್ಳುತ್ತಿದ್ದ ಕಾಲ ಈಗ ನಿಧಾನವಾಗಿ ಕಣ್ಮರೆಯಾಗುತ್ತಿದೆ.
ಆದರೂ ಸಂಸ್ಕೃತಿಯ ಉಳಿಸುವ ಕೆಲಸವನ್ನು ಮಂಗಳೂರಿನ ನಮ್ಮ ಕುಡ್ಲ ವಾಹಿನಿ ಕಳೆದ 2೦ ವರ್ಷಗಳಿಂದ ಗೂಡುದೀಪಗಳ ಪಂಥವನ್ನು ಮಾಡುವ ಮೂಲಕ ಸಂಸ್ಕೃತಿಯ ಉಳಿವಿಗೆ ಕೆಲಸ ಮಾಡುತ್ತಿದೆ.

ಮಂಗಳಾದೇವಿ ಅಮ್ಮನ ಸುಂದರ ಮೆರವಣಿಗೆ

ಮಂಗಳೂರಿನ ಬೋಳಾರ ಮಹತೋಭಾರ ಶ್ರೀಮಂಗಳಾದೇವಿ ದೇವಸ್ಥಾನದ ನವರಾತ್ರಿ ಮಹೋತ್ಸವದ ಮಂಗಳಾದೇವಿಯ ಉತ್ಸವ ಮೂರ್ತಿಯ ಶೋಭಾಯಾತ್ರೆಯನ್ನು ಕಣ್ಣಾರೆ ನೋಡುವ ಭಾಗ್ಯವೇ ಒಂದು ವಿಶಿಷ್ಟ. ನವರಾತ್ರಿ ಸಮಯದಲ್ಲಿ ಇಲ್ಲಿ ನಡೆಯುವ ರಥೋತ್ಸವವಂತೂ ಕರಾವಳಿಯ ದೇವಳಗಳಲ್ಲಿ ಸಿಗುವುದೇ ಅಪರೂಪ. ಅಂದಹಾಗೆ ಮಂಗಳೂರು ಹೆಸರಿನ ಹಿಂದಿನ ಶಕ್ತಿಯೇ ಮಂಗಳಾದೇವಿ ಎನ್ನುವುದು ಬಹಳಷ್ಟು ಮಂದಿಗೆ ಗೊತ್ತೇ ಇಲ್ಲ.

ಕುಡ್ಲದಲ್ಲಿ ಹಸಿರು ಶಾರದೆಯ ಸೊಬಗು

ಹಸಿರು ಶಾರದೆ ಎನ್ನುವ ಕಲ್ಪನೆಯೇ ಬಹಳ ಅಪರೂಪ. ಜಾಗತಿಕ ಮಟ್ಟದಲ್ಲಿ ಹಸಿರು ಉಳಿಸಲು ಹೋರಾಟ ನಡೆಯುತ್ತಿದ್ದಾಗ ಮಂಗಳೂರಿನ ಪಡೀಲ್ ಕರ್ಮಾರ್‌ನಲ್ಲಿ ಸಾರ್ವಜನಿಕ ಶಾರದೋತ್ಸವ ಸಮಿತಿಯವರು ಈ ಬಾರಿ ತಮ್ಮ ಶಾರದೆ ಮಾತೆಯನ್ನು ಹಸಿರೀಕರಣದ ಮೂಲಕ ಅಭಿವ್ಯಕ್ತಗೊಳಿಸಿದ್ದಾರೆ.
ಶಾರದಾ ಮಾತೆಯ ಮೂರ್ತಿಯ ಅಸುಪಾಸಿನಲ್ಲಿ ವಿಶೇಷವಾದ ಗಿಡಗಳನ್ನು ಇಡುವ ಜತೆಯಲ್ಲಿ ಭಕ್ತರಿಗೂ ಹಸಿರಿನ ಕುರಿತು ಜಾಗೃತಿ, ಮಾಹಿತಿಯನ್ನು ನೀಡುವ ಕೆಲಸ ಮಾಡುತ್ತಿದ್ದಾರೆ. ಪೂರ್ತಿಯಾಗಿ ಶಾರದಾ ಮಾತೆಯ ವೇದಿಕೆಯ ತುಂಬಾ ಹಸಿರಿನ ತೋರಣ, ಚಪ್ಪರ ಎಲ್ಲವೂ ಭಕ್ತರಿಗೆ ಹೊಸ ಅನುಭವವನ್ನು ನೀಡಬಲ್ಲದು.