Tagged: bjp

ಕರಾವಳಿಯ ರಾಜಕಾರಣಿಗಳ ಮಾನ ಹರಾಜು ಹಾಕಿದ ಜನತೆ !

ಜನರಿಗೆ ಕುಡಿಯುವ ನೀರಿಗಾಗಿ ರೂಪಿಸಲಾದ ಎತ್ತಿನಹೊಳೆ ಯೋಜನೆ ಬೆಂಬಲಿಸಿ ಕರಾವಳಿಗೆ ಕುಡಿಯುವ ನೀರಿಗೆ ತತ್ವಾರ ಮಾಡಿದ ಜನಪ್ರತಿನಿಧಿಗಳ ವಿರುದ್ಧ ದಕ್ಷಿಣ ಕನ್ನಡ ಜಿಲ್ಲೆ ಆಕ್ರೋಶವ್ಯಕ್ತಪಡಿಸಿ, ನಗರದ ಹಲವೆಡೆ ಬ್ಯಾನರ್‌ಗಳನ್ನು ಪ್ರದರ್ಶನ ಮಾಡಿದ್ದಾರೆ.

ಮಂಗಳೂರು ನಗರ ಸಹಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನೀರಿನ ಹಾಹಾಕಾರ ಹೆಚ್ಚಾಗುತ್ತಿರುವಂತೆಯೇ ಜಿಲ್ಲೆಗೆ ಆಗಿರುವ ಅನ್ಯಾಯವನ್ನು ಖಂಡಿಸಿ ನಗರದ ಹಲವೆಡೆ ಕೊಟ್ಟಾರ, ಪಂಪ್‌ವೆಲ್, ಹಂಪನಕಟ್ಟೆ ಮುಂತಾದೆಡೆ ಬ್ಯಾನರ್ ಹಾಕಲಾಗಿದೆ.
ಈ ಬ್ಯಾನರ್‌ಗಳಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಶಾಸಕರಾದ ಯು.ಟಿ. ಖಾದರ್, ವೇದವ್ಯಾಸ ಕಾಮತ್, ಭರತ್ ಶೆಟ್ಟಿ, ಉಮಾನಾಥ ಕೋಟ್ಯಾನ್, ರಾಜೇಶ್ ನಾಯ್ಕ, ಸಂಜೀವ ಮಠಂದೂರು, ಹರೀಶ್ ಪೂಂಜ, ಎಸ್. ಅಂಗಾರರಿಗೆ ಎಚ್ಚರಿಕೆ ನೀಡಲಾಗಿದೆ. ಎಲ್ಲ ಶಾಸಕರ ಹೆಸರು, ಭಾವಚಿತ್ರ ಹಾಕಿ, ‘ನಿಮ್ಮನ್ನು ಜನ ಚುನಾಯಿಸಿದ್ದು 40 ಲಕ್ಷ ರೂ. ಕಾರಿನಲ್ಲಿ ತಿರುಗಾಡಲು ಅಲ್ಲ, ಜಿಲ್ಲೆಯ ಜನರಿಗೆ ಈಗ ಕುಡಿಯುವ ನೀರಿಲ್ಲ, ಮೊದಲು ಎತ್ತಿನಹೊಳೆ ವಿರೋಧಿಸಿ ವಿಧಾನಸಭೆಯಲ್ಲಿ ಧರಣಿ ಮಾಡಿ, ಇಲ್ಲವಾದರೆ ರಾಜಿನಾಮೆ ಕೊಟ್ಟು ಅಮರನಾಂತ ಉಪವಾಸ ಕುಳಿತುಕೊಳ್ಳಿ’ ಆಗ ನೀವು ನಿಜವಾದ ಜನಸೇವಕರು ಎಂಬುದನ್ನು ಸಾಬೀತುಪಡಿಸಿ ಎಂದು ಸಂದೇಶ ಹಾಕಿದ್ದಾರೆ.

ಆ ಬ್ಯಾನರ್‌ಗಳ ಪಕ್ಕದಲ್ಲಿ ಇನ್ನೊಂದು ಬ್ಯಾನರ್‌ನಲ್ಲಿ ರಾಜ್ಯದ ಮಾಜಿ ಮುಖ್ಯಮಂತ್ರಿಗಳು, ಎತ್ತಿನಹೊಳೆ ಯೋಜನೆ ಬೆಂಬಲಿಸಿದ ದ.ಕ. ಜಿಲ್ಲೆಯವರಾದ ಡಾ. ಎಂ. ವೀರಪ್ಪ ಮೊಯ್ಲಿ ಹಾಗೂ ಕೇಂದ್ರ ಸಚಿವ ಡಿ.ವಿ.ಸದಾನಂದಗೌಡರ ಫೊಟೊ ಹಾಕಿ ‘13 ಸಾವಿರ ಕೋಟಿ ರೂ. ಯೋಜನೆಯ ಕಮಿಷನ್ ಆಸೆಗೆ ಜಿಲ್ಲೆಯ ಜೀವನದಿಯನ್ನು ಸರ್ವನಾಶ ಮಾಡಿ, ಜನರೀಗ ಟಾಯ್ಲೆಟ್, ಚರಂಡಿ ನೀರು ಶುದ್ಧೀಕರಿಸಿ ಕುಡಿಯುವಂತೆ ಮಾಡಿದ ಮೊಯ್ಲಿ ಹಾಗೂ ಡಿ.ವಿ ಸದಾನಂದ ಗೌಡರಿಗೆ ನಿದ್ದೆಯಲ್ಲಿರುವ ಜಿಲ್ಲೆಯ ಪ್ರಜೆಗಳಿಂದ ಹಾರ್ದಿಕ ಸ್ವಾಗತ ಎಂದು ವ್ಯಂಗ್ಯ ಮಾಡಿ ಬರಹ ಹಾಕಲಾಗಿದೆ.

ಕರಾವಳಿಯ ನೀರಿನ ಸಮಸ್ಯೆಗೆ ಕಾರಣಕರ್ತರಾದ ಜನಪ್ರತಿನಿಧಿಗಳಿಗೆ ಸಂದೇಶ ನೀಡುವ ಈ ಬ್ಯಾನರ್‌ನ್ನು ತೆಗೆಯುವಂತಿಲ್ಲ. ಒಂದು ವೇಳೆ ತೆಗೆಯುವುದಾದರೆ ‘ನಗರದಲ್ಲಿರುವ ಅನಧಿಕೃತ ಫ್ಲೆಕ್ಸ್ ಮೊದಲು ತೆರವು ಮಾಡಿ. ಆ ಬ್ಯಾನರ್‌ಗಳನ್ನು ತೆರವು ಮಾಡದೆ ಎತ್ತಿನಹೊಳೆ ಕುರಿತು ಅಳವಡಿಸಿರುವ ಭಿತ್ತಿಪತ್ರಗಳನ್ನು ತೆರವುಗೊಳಿಸಿದರೆ ಎಚ್ಚರಿಕೆ…. ಎಂದು ಮಂಗಳೂರು ಮಹಾನಗರಪಾಲಿಗೆ ಅಧಿಕಾರಿಗಳಿಗೂ ಎಚ್ಚರಿಕೆ ನೀಡಿದ್ದಾರೆ.

ಶಾಸಕರ ತಂದೆಯ ಸರಳತೆಗೆ ಎಲ್ಲರೂ ಫಿದಾ !

ಬಿಳಿ ಶರ್ಟ್ ತೊಟ್ಟು, ಲುಂಗಿಯನ್ನು ಮಡಚಿ ಮೊಣಕಾಲಗುಂಟ ಕಟ್ಟಿಕೊಂಡು, ಹಾಲಿನ ಕ್ಯಾನ್‌ನ್ನು ಸೈಕಲ್‌ಗೆ ಸಿಕ್ಕಿಸಿಕೊಂಡು ನಡೆದುಕೊಂಡು ಹೋಗುತ್ತಿರುವ ವಯೋವೃದ್ಧರೊಬ್ಬರು ಕೆಲದಿನಗಳಿಂದ ಇಂಟರ್ನೆಟ್ ಸೆನ್ಸೇಷನ್ ಆಗಿದ್ದಾರೆ. ಅವರ ಫೋಟೋ ಟ್ವಿಟರ್, ವಾಟ್ಸ್ಆ್ಯಪ್ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ಹರಿದಾಡುತ್ತಿವೆ. ಇಷ್ಟಕ್ಕೂ ಅವರು ಯಾರು?
ಬೆಳ್ತಂಗಡಿ ಶಾಸಕ , ಬಿಜೆಪಿ ನಾಯಕ ಹರೀಶ್ ಪೂಂಜಾತಂದೆ ಇವರು. ಗರ್ಡಾಡಿ ಗ್ರಾಮದ ನಿವಾಸಿಯಾಗಿರುವ ಮುತ್ತಣ್ಣಪೂಂಜಾ, 74 ಬಿಳಿ ಶರ್ಟ್, ಲುಂಗಿ ಧರಿಸಿಕೊಂಡು ಹಾಲಿನ ಕ್ಯಾನ್‌ನ್ನು ಸೈಕಲ್‌ಗೆ ಸಿಕ್ಕಿಸಿಕೊಂಡು ನಡೆದುಕೊಂಡು ಹೋಗುತ್ತಿರುವ ಚಿತ್ರ ಎಲ್ಲೆಡೆ ವೈರಲ್ ಆಗುತ್ತಿದೆ. ಮಗ ಶಾಸಕನಾದರೂ ತಮ್ಮ ಜೀವನ ಶೈಲಿಯನ್ನು ಬದಲಿಸಿಕೊಳ್ಳದೆ ಹಿಂದಿನಂತೆ ಸರಳತೆಯನ್ನು ಮುಂದುವರಿಸಿಕೊಂಡು ಹೋಗುತ್ತಿರುವ ಮುತ್ತಣ್ಣ ಅವರಿಗೆ ನೆಟ್ಟಿಗರು ಫಿದಾ ಆಗಿದ್ದಾರೆ.

ಈ ಹಿಂದೆ ಬೀಡಿ ತಯಾರಿಕಾ ಘಟಕವನ್ನು ಹೊಂದಿದ್ದೆವು. ಆಗ ಸೈಕಲ್ ಚಲಾಯಿಸಿಕೊಂಡು ಹೋಗುತ್ತಿದ್ದೆ. ಡೈರಿಗೆ ಹಾಲು ಹಾಕಿ ಬರಲು ಇತ್ತೀಚಿನವರೆಗೆ ಸೈಕಲ್ ಮೇಲೆ ಹೋಗುತ್ತಿದ್ದೆ. ಕೆಲ ದಿನಗಳಿಂದ ನೆರೆಮನೆಯವರು ಸ್ಕೂಟಿಯಲ್ಲಿ ಡ್ರಾಫ್ ಕೊಡುತ್ತಾರೆ ಎನ್ನುತ್ತಾರೆ ಮುತ್ತಣ್ಣ.

ಮಂಗಳೂರಿನಲ್ಲಿ ಕಾಣಸಿಗಲಿದೆ ವಾಟರ್ ಪಾಲಿಟಿಕ್ಸ್

ಮಂಗಳೂರು ಮಹಾನಗರಪಾಲಿಕೆ ವ್ಯಾಪ್ತಿಗೆ ಕುಡಿಯುವ ನೀರು ಪೂರೈಕೆಯಾಗುವ ತುಂಬೆ ಡ್ಯಾಮ್‌ನಲ್ಲಿ ನೀರಿನ ಮಟ್ಟ ಕುಸಿಯುತ್ತಿದೆ. ಇದನ್ನು ಗಮನಿಸಿ ಜಿಲ್ಲಾಡಳಿತ ರೇಶನಿಂಗ್ ಮೂಲಕ ನೀರು ಪೂರೈಕೆ ಆರಂಭಿಸಿತ್ತು.

ಇಲ್ಲಿಯ ಜನಪ್ರತಿನಿಧಿಗಳು ಡ್ಯಾಮ್ ವೀಕ್ಷಿಸಿ, ತುಂಬಾ ನೀರಿದೆ ಎಂದು ಹೇಳಿ, ರೇಶನಿಂಗ್ ನಿಲ್ಲಿಸಲು ಒತ್ತಡ ತಂದರು. ನೀರಿನ ಸೋರಿಕೆ, ಪೋಲು, ದುರ್ಬಳಕೆ ತಡೆದು, ಮಿತ ವ್ಯಯ ಮಾಡಲು ಹೇಳಿ, ಬದಲಿ ವ್ಯವಸ್ಥೆಗೆ ಸಲಹೆ ಮಾಡಬೇಕಾದ ಜನಪ್ರತಿನಿಧಿಗಳು ಪ್ರತಿಪಕ್ಷದವರ ಮಾದರಿಯಲ್ಲಿ ಆರೋಪ- ಪ್ರತ್ಯಾರೋಪದಲ್ಲಿ ತೊಡಗಿದ್ದಾರೆ.

ಮಂಗಳೂರು ಸಹಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಳೆಯಾಗುವ ಲಕ್ಷಣ ಕಾ ಣಿಸುತ್ತಿಲ್ಲ. ನಗರ ಮಾತ್ರವಲ್ಲ, ಗ್ರಾಮೀಣ ಪ್ರದೇಶಗಳಲ್ಲೂ ನೀರಿನ ತೀವ್ರ ಸಮಸ್ಯೆ ಇದೆ. ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಮತ್ತೆ ರೇಶನಿಂಗ್ ಆರಂಭಿಸಿದೆ.

ಮತ್ತೆ ರೇಶನಿಂಗ್: ಮೇ 1ರ ಬೆಳಗ್ಗೆ 6 ಗಂಟೆಯಿಂದ ಮೇ 3ರ ಬೆಳಗ್ಗೆ 6 ಗಂಟೆಯ ವರೆಗಿನ 48 ತಾಸುಗಳ ನೀರು ಪೂರೈಕೆ ಸ್ಥಗಿತಗೊಳ್ಳಲಿದೆ.
ಮೇ 3ರ ಬೆಳಗ್ಗೆ 6 ಗಂಟೆಯಿಂದ ಮೇ 7ರ ಬೆಳಗ್ಗೆ 6 ಗಂಟೆ ವರೆಗಿನ 96 ಗಂಟೆ ನೀರು ಸರಬರಾಜು ನಡೆಯಲಿದೆ. ಮೇ 7ರ ಬೆಳಗ್ಗೆ 6ರಿಂದ ಮೇ 9ರ ತನಕ ಬೆಳಗ್ಗೆ 6ರ ತನಕ 48 ಗಂಟೆ ನೀರು ಪೂರೈಕೆ ಸ್ಥಗಿತಗೊಳ್ಳಲಿದೆ.
ಮೇ 9ರ ಬೆಳಗ್ಗೆ 6ರಿಂದ ಮೇ 13ರ ಬೆಳಗ್ಗೆ 6ರ ತನಕ 96 ಗಂಟೆ ಕಾಲ ನೀರು ಪೂರೈಕೆ ನಡೆಯಲಿದೆ. ಮೇ 13ರ ಬೆಳಗ್ಗೆ 6ರಿಂದ ಮೇ 15ರ ಬೆಳಗ್ಗೆ 6ರ ತನಕ 48 ಗಂಟೆ ಕಾಲ ನೀರು ಪೂರೈಕೆ ಸ್ಥಗಿತಗೊಳ್ಳಲಿದೆ. ಮೇ 15ರ ಬೆಳಗ್ಗೆ 6ರಿಂದ ಮೇ 19ರ ಬೆಳಗ್ಗೆ 6 ಗಂಟೆ ತನಕ 96 ಗಂಟೆ ನೀರು ಪೂರೈಕೆ ನಡೆಯಲಿದೆ. ಮೇ 19ರ ಬೆಳಗ್ಗೆ 6ರಿಂದ ಮೇ 21ರ ಬೆಳಗ್ಗೆ 6 ಗಂಟೆ ತನಕ 48 ಗಂಟೆ ನೀರು ಪೂರೈಕೆ ಸ್ಥಗಿತಗೊಳ್ಳಲಿದೆ.