Category: ಹೊಸ ಸುದ್ದಿ

ಕರಾವಳಿಯ ರಾಜಕಾರಣಿಗಳ ಮಾನ ಹರಾಜು ಹಾಕಿದ ಜನತೆ !

ಜನರಿಗೆ ಕುಡಿಯುವ ನೀರಿಗಾಗಿ ರೂಪಿಸಲಾದ ಎತ್ತಿನಹೊಳೆ ಯೋಜನೆ ಬೆಂಬಲಿಸಿ ಕರಾವಳಿಗೆ ಕುಡಿಯುವ ನೀರಿಗೆ ತತ್ವಾರ ಮಾಡಿದ ಜನಪ್ರತಿನಿಧಿಗಳ ವಿರುದ್ಧ ದಕ್ಷಿಣ ಕನ್ನಡ ಜಿಲ್ಲೆ ಆಕ್ರೋಶವ್ಯಕ್ತಪಡಿಸಿ, ನಗರದ ಹಲವೆಡೆ ಬ್ಯಾನರ್‌ಗಳನ್ನು ಪ್ರದರ್ಶನ ಮಾಡಿದ್ದಾರೆ.

ಮಂಗಳೂರು ನಗರ ಸಹಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನೀರಿನ ಹಾಹಾಕಾರ ಹೆಚ್ಚಾಗುತ್ತಿರುವಂತೆಯೇ ಜಿಲ್ಲೆಗೆ ಆಗಿರುವ ಅನ್ಯಾಯವನ್ನು ಖಂಡಿಸಿ ನಗರದ ಹಲವೆಡೆ ಕೊಟ್ಟಾರ, ಪಂಪ್‌ವೆಲ್, ಹಂಪನಕಟ್ಟೆ ಮುಂತಾದೆಡೆ ಬ್ಯಾನರ್ ಹಾಕಲಾಗಿದೆ.
ಈ ಬ್ಯಾನರ್‌ಗಳಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಶಾಸಕರಾದ ಯು.ಟಿ. ಖಾದರ್, ವೇದವ್ಯಾಸ ಕಾಮತ್, ಭರತ್ ಶೆಟ್ಟಿ, ಉಮಾನಾಥ ಕೋಟ್ಯಾನ್, ರಾಜೇಶ್ ನಾಯ್ಕ, ಸಂಜೀವ ಮಠಂದೂರು, ಹರೀಶ್ ಪೂಂಜ, ಎಸ್. ಅಂಗಾರರಿಗೆ ಎಚ್ಚರಿಕೆ ನೀಡಲಾಗಿದೆ. ಎಲ್ಲ ಶಾಸಕರ ಹೆಸರು, ಭಾವಚಿತ್ರ ಹಾಕಿ, ‘ನಿಮ್ಮನ್ನು ಜನ ಚುನಾಯಿಸಿದ್ದು 40 ಲಕ್ಷ ರೂ. ಕಾರಿನಲ್ಲಿ ತಿರುಗಾಡಲು ಅಲ್ಲ, ಜಿಲ್ಲೆಯ ಜನರಿಗೆ ಈಗ ಕುಡಿಯುವ ನೀರಿಲ್ಲ, ಮೊದಲು ಎತ್ತಿನಹೊಳೆ ವಿರೋಧಿಸಿ ವಿಧಾನಸಭೆಯಲ್ಲಿ ಧರಣಿ ಮಾಡಿ, ಇಲ್ಲವಾದರೆ ರಾಜಿನಾಮೆ ಕೊಟ್ಟು ಅಮರನಾಂತ ಉಪವಾಸ ಕುಳಿತುಕೊಳ್ಳಿ’ ಆಗ ನೀವು ನಿಜವಾದ ಜನಸೇವಕರು ಎಂಬುದನ್ನು ಸಾಬೀತುಪಡಿಸಿ ಎಂದು ಸಂದೇಶ ಹಾಕಿದ್ದಾರೆ.

ಆ ಬ್ಯಾನರ್‌ಗಳ ಪಕ್ಕದಲ್ಲಿ ಇನ್ನೊಂದು ಬ್ಯಾನರ್‌ನಲ್ಲಿ ರಾಜ್ಯದ ಮಾಜಿ ಮುಖ್ಯಮಂತ್ರಿಗಳು, ಎತ್ತಿನಹೊಳೆ ಯೋಜನೆ ಬೆಂಬಲಿಸಿದ ದ.ಕ. ಜಿಲ್ಲೆಯವರಾದ ಡಾ. ಎಂ. ವೀರಪ್ಪ ಮೊಯ್ಲಿ ಹಾಗೂ ಕೇಂದ್ರ ಸಚಿವ ಡಿ.ವಿ.ಸದಾನಂದಗೌಡರ ಫೊಟೊ ಹಾಕಿ ‘13 ಸಾವಿರ ಕೋಟಿ ರೂ. ಯೋಜನೆಯ ಕಮಿಷನ್ ಆಸೆಗೆ ಜಿಲ್ಲೆಯ ಜೀವನದಿಯನ್ನು ಸರ್ವನಾಶ ಮಾಡಿ, ಜನರೀಗ ಟಾಯ್ಲೆಟ್, ಚರಂಡಿ ನೀರು ಶುದ್ಧೀಕರಿಸಿ ಕುಡಿಯುವಂತೆ ಮಾಡಿದ ಮೊಯ್ಲಿ ಹಾಗೂ ಡಿ.ವಿ ಸದಾನಂದ ಗೌಡರಿಗೆ ನಿದ್ದೆಯಲ್ಲಿರುವ ಜಿಲ್ಲೆಯ ಪ್ರಜೆಗಳಿಂದ ಹಾರ್ದಿಕ ಸ್ವಾಗತ ಎಂದು ವ್ಯಂಗ್ಯ ಮಾಡಿ ಬರಹ ಹಾಕಲಾಗಿದೆ.

ಕರಾವಳಿಯ ನೀರಿನ ಸಮಸ್ಯೆಗೆ ಕಾರಣಕರ್ತರಾದ ಜನಪ್ರತಿನಿಧಿಗಳಿಗೆ ಸಂದೇಶ ನೀಡುವ ಈ ಬ್ಯಾನರ್‌ನ್ನು ತೆಗೆಯುವಂತಿಲ್ಲ. ಒಂದು ವೇಳೆ ತೆಗೆಯುವುದಾದರೆ ‘ನಗರದಲ್ಲಿರುವ ಅನಧಿಕೃತ ಫ್ಲೆಕ್ಸ್ ಮೊದಲು ತೆರವು ಮಾಡಿ. ಆ ಬ್ಯಾನರ್‌ಗಳನ್ನು ತೆರವು ಮಾಡದೆ ಎತ್ತಿನಹೊಳೆ ಕುರಿತು ಅಳವಡಿಸಿರುವ ಭಿತ್ತಿಪತ್ರಗಳನ್ನು ತೆರವುಗೊಳಿಸಿದರೆ ಎಚ್ಚರಿಕೆ…. ಎಂದು ಮಂಗಳೂರು ಮಹಾನಗರಪಾಲಿಗೆ ಅಧಿಕಾರಿಗಳಿಗೂ ಎಚ್ಚರಿಕೆ ನೀಡಿದ್ದಾರೆ.

ಕುಡ್ಲದವರು ಕೇಳುವ ಮೊದಲ ಮಾತು !

ಮಂಗಳೂರಿನ ಜನ ಎಲ್ಲಿ ಬೇಕಾದರೂ ನೋಡಿ ಎಳೆನೀರು ನೋಡಿದಾಕ್ಷಣ ಮೊದಲು ಕೇಳುವ ಮಾತು ಈ ಎಳೆನೀರು ಊರಿದ್ದ ( ಬೊಂಡ ಊರ್ದನಾ…?) ಅಲ್ಲ ಎಂದಾಗ ಇರ್ಲಿ ಒಂದು ಕೊಡಿ ಎನ್ನುತ್ತಾರೆ. ಹೌದು ಎಂದ್ರೆ ಬಹಳ ಖುಷಿಯಿಂದ ಕುಡಿದು ಒಳ್ಳೆಯ ನೀರಿತ್ತು ಎಂದು ಬಿಡುತ್ತಾರೆ.

ಎಳೆನೀರಿನಿಂದ ಆರೋಗ್ಯದ ಮೇಲಾಗುವ ಪ್ರಯೋಜನಗಳು ಈ ರೀತಿ ಇವೆ: ಇದರಲ್ಲಿ ಆಂಟಿ ಏಜಿಂಗ್ ಮತ್ತು ಕ್ಯಾನ್ಸರ್ ವಿರೋಧಿ ಗುಣಗಳಿದ್ದು, ಚರ್ಮ ಸುಕ್ಕುಗಟ್ಟುವುದನ್ನು ಕಡಿಮೆ ಮಾಡುತ್ತದೆ. ಪ್ರತಿನಿತ್ಯ ಎಳೆನೀರು ಕುಡಿದರೆ ಚಯಾಪಚಯ ಪ್ರಕ್ರಿಯೆಯನ್ನು ಹೆಚ್ಚಿಸುತ್ತದೆ ಮತ್ತು ದೇಹದ ಶುಗರ್ ಅಂಶವನ್ನು ಕರಗಿಸುತ್ತದೆ ಹಾಗೂ ಕೊಬ್ಬಿನಂಶವು ಕಡಿಮೆಯಾಗುತ್ತದೆ.

ಕಿಡ್ನಿ ಸ್ಟೋನ್ಸ್ ಅನ್ನು ಕರಗಿಸಲು ನೆರವಾಗುತ್ತದೆ. ಇದರಲ್ಲಿರುವ ಪೊಟಾಶಿಯಂ ಅಂಶವು ಮೂತ್ರದ ಕ್ಷಾರದ ನಿರ್ವಹಣೆಯಲ್ಲಿ ಪ್ರಮುಖ ಪಾತ್ರವಹಿಸುತ್ತದೆ ಮತ್ತು ಕಿಡ್ನಿ ಸ್ಟೋನ್ ಉತ್ಪಾದನೆಯನ್ನು ತಡೆಯುತ್ತದೆ.

ಜೀರ್ಣ ಕ್ರಿಯೆಯನ್ನು ಸುಲಭವಾಗಿಸುತ್ತದೆ. ನೀರಿನಲ್ಲಿ ಮಿನರಲ್ ಅಂಶಗಳಾದ ಕ್ಯಾಲ್ಷಿಯಂ, ಮ್ಯಾಂಗನೀಸ್ ಮತ್ತು ಸತು ಇದೆ. ಇವು ದೇಹವನ್ನು ಮರುಪೂರಣ ಮಾಡಲು ನೆರವಾಗುತ್ತದೆ. ಎಳೆನೀರಲ್ಲಿ ಸಕ್ಕರೆ ಮತ್ತು ಸೋಡಿಯಂ ಅಂಶ ಕಡಿಮೆ ಇದೆ ಮತ್ತು ಪೋಟಾಶಿಯಂ ಅಂಶ ಅಧಿಕವಾಗಿದೆ. ಕ್ಯಾಲ್ಷಿಯಂ ಮತ್ತು ಕ್ಲೋರೈಡ್ ನೀರಿನ ಅಂಶವನ್ನು ಹೆಚ್ಚಿಸಿ ದೇಹವನ್ನು ಪುನರ್ ಯೌನಗೊಳಿಸುತ್ತದೆ.

ಕ್ಯಾಲ್ಷಿಯಂ ಅಧಿಕವಾಗಿದೆ. ಆರೋಗ್ಯಕರ ಮೂಳೆ, ಮಾಂಸಖಂಡಗಳಿಗೆ ಇದು ಅಗತ್ಯವಾಗಿ ಬೇಕು. ಮಧುಮೇಹ ನಿಯಂತ್ರಸಲು ಸಹಾಯ ಮಾಡುತ್ತದೆ. ರಕ್ತ ಪರಿಚಲನೆಯನ್ನು ಸುಧಾರಿಸುವ ಸಾಮರ್ಥ್ಯ ಹೊಂದಿದೆ. ರಕ್ತದೊತ್ತಡವನ್ನು ಕಡಿಮೆ ಮಾಡಲು ಕೂಡ ಇದು ನೆರವಾಗುತ್ತದೆ.

ಶಾಸಕರ ತಂದೆಯ ಸರಳತೆಗೆ ಎಲ್ಲರೂ ಫಿದಾ !

ಬಿಳಿ ಶರ್ಟ್ ತೊಟ್ಟು, ಲುಂಗಿಯನ್ನು ಮಡಚಿ ಮೊಣಕಾಲಗುಂಟ ಕಟ್ಟಿಕೊಂಡು, ಹಾಲಿನ ಕ್ಯಾನ್‌ನ್ನು ಸೈಕಲ್‌ಗೆ ಸಿಕ್ಕಿಸಿಕೊಂಡು ನಡೆದುಕೊಂಡು ಹೋಗುತ್ತಿರುವ ವಯೋವೃದ್ಧರೊಬ್ಬರು ಕೆಲದಿನಗಳಿಂದ ಇಂಟರ್ನೆಟ್ ಸೆನ್ಸೇಷನ್ ಆಗಿದ್ದಾರೆ. ಅವರ ಫೋಟೋ ಟ್ವಿಟರ್, ವಾಟ್ಸ್ಆ್ಯಪ್ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ಹರಿದಾಡುತ್ತಿವೆ. ಇಷ್ಟಕ್ಕೂ ಅವರು ಯಾರು?
ಬೆಳ್ತಂಗಡಿ ಶಾಸಕ , ಬಿಜೆಪಿ ನಾಯಕ ಹರೀಶ್ ಪೂಂಜಾತಂದೆ ಇವರು. ಗರ್ಡಾಡಿ ಗ್ರಾಮದ ನಿವಾಸಿಯಾಗಿರುವ ಮುತ್ತಣ್ಣಪೂಂಜಾ, 74 ಬಿಳಿ ಶರ್ಟ್, ಲುಂಗಿ ಧರಿಸಿಕೊಂಡು ಹಾಲಿನ ಕ್ಯಾನ್‌ನ್ನು ಸೈಕಲ್‌ಗೆ ಸಿಕ್ಕಿಸಿಕೊಂಡು ನಡೆದುಕೊಂಡು ಹೋಗುತ್ತಿರುವ ಚಿತ್ರ ಎಲ್ಲೆಡೆ ವೈರಲ್ ಆಗುತ್ತಿದೆ. ಮಗ ಶಾಸಕನಾದರೂ ತಮ್ಮ ಜೀವನ ಶೈಲಿಯನ್ನು ಬದಲಿಸಿಕೊಳ್ಳದೆ ಹಿಂದಿನಂತೆ ಸರಳತೆಯನ್ನು ಮುಂದುವರಿಸಿಕೊಂಡು ಹೋಗುತ್ತಿರುವ ಮುತ್ತಣ್ಣ ಅವರಿಗೆ ನೆಟ್ಟಿಗರು ಫಿದಾ ಆಗಿದ್ದಾರೆ.

ಈ ಹಿಂದೆ ಬೀಡಿ ತಯಾರಿಕಾ ಘಟಕವನ್ನು ಹೊಂದಿದ್ದೆವು. ಆಗ ಸೈಕಲ್ ಚಲಾಯಿಸಿಕೊಂಡು ಹೋಗುತ್ತಿದ್ದೆ. ಡೈರಿಗೆ ಹಾಲು ಹಾಕಿ ಬರಲು ಇತ್ತೀಚಿನವರೆಗೆ ಸೈಕಲ್ ಮೇಲೆ ಹೋಗುತ್ತಿದ್ದೆ. ಕೆಲ ದಿನಗಳಿಂದ ನೆರೆಮನೆಯವರು ಸ್ಕೂಟಿಯಲ್ಲಿ ಡ್ರಾಫ್ ಕೊಡುತ್ತಾರೆ ಎನ್ನುತ್ತಾರೆ ಮುತ್ತಣ್ಣ.

ಮೀನುಗಾರನ ಬಲೆಗೆ ಬಿದ್ದ ಬಿಗ್ ತೊರಕೆ‌ ಮೀನು!

ಒಂದಲ್ಲ ಎರಡಲ್ಲ ಭರ್ತಿ 1200 ಕೆಜಿ ತೂಕದ ತೊರಕೆ‌‌ ಮೀನು ಮಲ್ಪೆ ಮೀನುಗಾರ ಮಿಥುನ್ ಕುಂದರ್ ಅವರ ಬಲೆಗೆ ಶನಿವಾರ ಬಿದ್ದಿದೆ.

ಮಿಥುನ್ ಕುಂದರ್ ಅವರ ಮಾಲೀಕತ್ವದ ವಿಘ್ನರಾಜ್ -2 ಆಳ‌ಸಮುದ್ರಗಾರಿಕೆಯ ಬೋಟಿನ ಮೀನುಗಾರರು ಮೀನುಗಾರಿಕೆ ನಡೆಸುತ್ತಿದ್ದಾಗ ಅವರಿಗೆ ಸಿಕ್ಕಿದೆ. ವಿಶೇಷವಾಗಿ ಇದನ್ನು ಮಂಗಳೂರಿನ ಒಣ ಮೀನು ವ್ಯಾಪಾರಿಯೊಬ್ಬರು ಕೆಜಿಗೆ 50 ರೂನಂತೆ ಕೊಟ್ಟು ಖರೀದಿ ಮಾಡಿದ್ದಾರೆ.

ನಟಿ ಸೋನಾಲ್ ಹಿಂದಿರುವ ಶಕ್ತಿ !

ಕುಡ್ಲದ ಸೋನಾಲ್ ಮೊಂತೆರೋ ತುಳು ಸಿನಿಮಾದ ಮೂಲಕ ಪರಿಚಯವಾಗಿ ಈಗ ಕನ್ನಡದಲ್ಲಿ ಬ್ಯುಸಿ ಇರುವ ನಟಿಮಣಿ.
ತುಳುವಿನ ನಿರ್ದೇಶಕ ಸೂರಜ್ ಶೆಟ್ಟಿ ನಿರ್ದೇಶನದ ಎಕ್ಕಸಕ ಹಾಗೂ ಪಿಲಿಬೈಲ್ ಯಮುನಕ್ಕ ಜತೆಗೆ ಜೈ ತುಳುನಾಡ್ ಸಿನಿಮಾದ ಮೂಲಕ ತುಳುವರಿಗೆ ಪರಿಚಯವಾದ ಸೋನಾಲ್ ಹಿಂದಿರುವ ಶಕ್ತಿ ಅವರ ಅಮ್ಮ ಲೀಟಾ ಮೊಂತೆರೋ.
ಬಣ್ಣದ ಬದುಕಿಗೆ ಅವರ ತಾಯಿ ನೀಡಿದ ಪ್ರೇರಣೆ, ಪ್ರೋತ್ಸಾಹ ಜತೆಗೆ ಸಹಕಾರದ ಮನೋಭಾವವೇ ಇಂದು ಸೋನಾಲ್ ತುಳು ಮಾತ್ರವಲ್ಲ ಕನ್ನಡದ ಸಿನಿಮಾ ಅಭಿಮಾನಿಗಳಿಗೂ ಪ್ರೀತಿಯ ಹುಡುಗಿಯಾಗಿದ್ದಾರೆ.